< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 10 >

1 ಸಹೋದರರೇ, ನಾನು ನಿಮಗೆ ತಿಳಿಸಲು ಅಪೇಕ್ಷಿಸುವ ಸಂಗತಿ ಏನೆಂದರೆ, ನಮ್ಮ ಪೂರ್ವಿಕರೆಲ್ಲರೂ ಮೇಘದ ಅಡಿಯಲ್ಲಿದ್ದು ಸಮುದ್ರವನ್ನು ದಾಟಿಹೋದರು. 2 ಅವರೆಲ್ಲರೂ ಮೋಶೆಯನ್ನು ಹಿಂಬಾಲಿಸುವುದಕ್ಕಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನವನ್ನು ಹೊಂದಿದರು. 3 ಅವರೆಲ್ಲರೂ ಆತ್ಮೀಕವಾದ ಒಂದೇ ಆಹಾರವನ್ನು ತಿಂದರು. 4 ಅವರೆಲ್ಲರೂ ದೈವಿಕವಾದ ಒಂದೇ ನೀರನ್ನು ಕುಡಿದರು. ಹೇಗೆಂದರೆ ಅವರನ್ನು ಹಿಂಬಾಲಿಸುತ್ತಿದ್ದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿಯುತ್ತಿದ್ದರು. ಆ ಬಂಡೆ ಕ್ರಿಸ್ತನೇ. 5 ಆದರೂ ಅವರಲ್ಲಿ ಬಹು ಮಂದಿಯನ್ನು ದೇವರು ಮೆಚ್ಚಲಿಲ್ಲ. ಆದ್ದರಿಂದ ಅವರು ಸಂಹರಿಸಲ್ಪಟ್ಟರು ಮತ್ತು ಅವರ ಶವಗಳು ಅಡವಿಯಲ್ಲೆಲ್ಲ ಬಿದ್ದವು. 6 ಅವರು ಕೆಟ್ಟ ವಿಷಯಗಳನ್ನು ಮೋಹಿಸದಂತೆ ನಾವು ಮೋಹಿಸುವವರಾಗಬಾರದೆಂಬುದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. 7 ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು, “ಜನರು ತಿನ್ನುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು. ಕಾಮಾಭಿಲಾಷೆಯಿಂದ ಕುಣಿದಾಡುವುದಕ್ಕೆ ಎದ್ದರು” ಎಂದು ಬರೆದಿದೆಯಲ್ಲಾ. ನೀವು ಅವರ ಹಾಗೆ ವಿಗ್ರಹಾರಾಧಕರಾಗಬೇಡಿರಿ. 8 ಅವರಲ್ಲಿ ಕೆಲವರು ಜಾರತ್ವ ಮಾಡಿ ಒಂದೇ ದಿನದಲ್ಲಿ ಇಪ್ಪತ್ತು ಮೂರು ಸಾವಿರ ಜನರು ಸಾವನ್ನಪ್ಪಿದರು. ಅವರ ಹಾಗೆ ನಾವು ಜಾರತ್ವ ಮಾಡದೆ ಇರೋಣ. 9 ಅವರಲ್ಲಿ ಕೆಲವರು ಕರ್ತನನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದರು. ನಾವು ಪರೀಕ್ಷಿಸದೆ ಇರೋಣ. 10 ೧೦ ಇದಲ್ಲದೆ ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕ ದೂತನ ಕೈಯಿಂದ ನಾಶವಾದರು. ನೀವು ಗುಣಗುಟ್ಟಬೇಡಿರಿ. 11 ೧೧ ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ. ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಇದು ಎಚ್ಚರಿಕೆಯ ಮಾತುಗಳಾಗಿ ಬರೆದಿವೆ. (aiōn g165) 12 ೧೨ ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ. 13 ೧೩ ಮನುಷ್ಯರಿಗೆ ಸಾಧಾರಣವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲವಲ್ಲ. ದೇವರು ನಂಬಿಗಸ್ತನು. ನಿಮ್ಮ ಶಕ್ತಿಗೆ ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು. 14 ೧೪ ಆದ್ದರಿಂದ ಪ್ರಿಯರೇ, ವಿಗ್ರಹಾರಾಧನೆಯನ್ನು ಬಿಟ್ಟು ದೂರವಾಗಿರಿ. 15 ೧೫ ನೀವು ವಿವೇಕಿಗಳೆಂದು ಇದನ್ನು ಹೇಳುತ್ತೇನೆ. ನಾನು ಹೇಳುವುದನ್ನು ನೀವೇ ಯೋಚಿಸಿರಿ. 16 ೧೬ ನಾವು ದೇವರ ಸ್ತೋತ್ರಮಾಡಿ ಪಾನಪಾತ್ರೆಯಲ್ಲಿ ಪಾನ ಮಾಡುವುದು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? ನಾವು ರೊಟ್ಟಿಯನ್ನು ಮುರಿದು ತಿನ್ನುವುದು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? 17 ೧೭ ರೊಟ್ಟಿ ಒಂದೇ ಆಗಿರುವ ಹಾಗೆ ಅನೇಕರಾಗಿರುವ ನಾವೆಲ್ಲರು ಒಂದೇ ದೇಹದಂತಿದ್ದೇವೆ. ಯಾಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಂಡು ತಿನ್ನುತ್ತೇವೆ. 18 ೧೮ ಇಸ್ರಾಯೇಲ್ಯ ಜನರ ಕುರಿತು ಯೋಚಿಸಿರಿ. ಯಜ್ಞಮಾಡಿದ್ದನ್ನು ತಿನ್ನುವವರು ಯಜ್ಞವೇದಿಯೊಡನೆ ಪಾಲುಗಾರರಾಗಿದ್ದಾರಲ್ಲವೇ. 19 ೧೯ ಹಾಗಾದರೆ ನಾನು ಏನು ಹೇಳಿದ ಹಾಗಾಯಿತು? ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥವು ವಾಸ್ತವವೆಂದೋ ಅಥವಾ ವಿಗ್ರಹವು ವಾಸ್ತವವೆಂದು ನನ್ನ ಅಭಿಪ್ರಾಯವೋ? ಅಲ್ಲ, 20 ೨೦ ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ, ದೆವ್ವಗಳಿಗೆ ಅರ್ಪಿಸುತ್ತಾರೆಂಬುದು ನನ್ನ ಅಭಿಪ್ರಾಯವು. ನೀವು ದೆವ್ವಗಳೊಡನೆ ಪಾಲುಗಾರರಾಗಿರಬೇಕೆಂಬುದು ನನ್ನ ಇಷ್ಟವಲ್ಲ. 21 ೨೧ ನೀವು ಕರ್ತನ ಪಾನಪಾತ್ರೆಯಲ್ಲಿಯೂ ಹಾಗೂ ದೆವ್ವಗಳ ಪಾನಪಾತ್ರೆಯಲ್ಲಿಯೂ ಕುಡಿಯಲಾರಿರಿ. ಕರ್ತನ ಪಂಕ್ತಿಯಲ್ಲಿಯೂ ಮತ್ತು ದೆವ್ವಗಳ ಪಂಕ್ತಿಯಲ್ಲಿಯೂ ಊಟಮಾಡಲಾರಿರಿ. 22 ೨೨ ಕರ್ತನಿಗೆ ಕೋಪವನ್ನುಂಟುಮಾಡಿ ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೋ? 23 ೨೩ “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಅಧಿಕಾರವುಂಟು.” ಆದರೆ ಎಲ್ಲವೂ ಪ್ರಯೋಜನಕರವಾಗಿರುವುದಿಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಅಧಿಕಾರವುಂಟು” ಆದರೆ ಎಲ್ಲವೂ ಜನರನ್ನು ಭಕ್ತಿಯಲ್ಲಿ ಬೆಳೆಸುವುದಿಲ್ಲ. 24 ೨೪ ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೇ ಪರಹಿತವನ್ನು ಚಿಂತಿಸಲಿ. 25 ೨೫ ಮಾಂಸದ ಅಂಗಡಿಯಲ್ಲಿ ಮಾರುವಂಥದ್ದು ಏನಿದ್ದರೂ ಅದನ್ನು ಮನಸ್ಸಾಕ್ಷಿಯಲ್ಲಿ ಸಂಶಯ ಹುಟ್ಟಿಸುವಂತೆ ವಿಚಾರ ಮಾಡದೇ ತಿನ್ನಿರಿ. 26 ೨೬ “ಭೂಮಿಯು ಅದರಲ್ಲಿರುವ ಸಮಸ್ತವೂ ಕರ್ತನದಲ್ಲವೇ.” 27 ೨೭ ಕ್ರಿಸ್ತನನ್ನು ನಂಬದವರಲ್ಲಿ ಒಬ್ಬನು ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವುದಕ್ಕೆ ನಿಮಗಿಷ್ಟವಿದ್ದರೆ ನಿಮಗೇನು ಬಡಿಸಿದರೂ ಮನಸ್ಸಾಕ್ಷಿಯನ್ನು ಪ್ರಶ್ನಿಸದೇ ಅದನ್ನು ತಿನ್ನಿರಿ. 28 ೨೮ ಆದರೆ ಒಬ್ಬನು ನಿಮಗೆ “ಇದು ವಿಗ್ರಹಾಲಯದಲ್ಲಿ ಬಲಿಕೊಟ್ಟದ್ದು” ಎಂದು ಹೇಳಿದರೆ ಈ ಸಂಗತಿಯನ್ನು ತಿಳಿಸಿದವನ ನಿಮಿತ್ತವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ಅದನ್ನು ತಿನ್ನಬೇಡಿರಿ. 29 ೨೯ ಅದು ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ; ಮತ್ತೊಬ್ಬನ ಮನಸ್ಸಾಕ್ಷಿಗಾಗಿಯೇ ಹೇಳಲಾಗಿದೆ. ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು? 30 ೩೦ ನಾನು ಕೃತಜ್ಞತೆಯೊಡನೆ ಊಟಮಾಡಿ ದೇವರನ್ನು ಸ್ತುತಿಸಿದ ಮೇಲೆ ಆ ಪದಾರ್ಥಗಳ ನಿಮಿತ್ತ ನನಗೆ ಯಾಕೆ ದೂಷಣೆಯಾಗಬೇಕು? 31 ೩೧ ಹೀಗಿರಲಾಗಿ ನೀವು ತಿಂದರೂ, ಕುಡಿದರೂ, ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿರಿ. 32 ೩೨ ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ. 33 ೩೩ ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೇ ಮನುಷ್ಯರೆಲ್ಲರು ರಕ್ಷಣೆ ಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ, ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.

< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 10 >