< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 18 >

1 ದಾವೀದನು ಫಿಲಿಷ್ಟಿಯರನ್ನು ಮುತ್ತಿಗೆಹಾಕಿ, ಅವರನ್ನು ಸೋಲಿಸಿ, ಅವರಿಂದ ಗತ್ ಪಟ್ಟಣವನ್ನೂ ಮತ್ತು ಅದರ ಗ್ರಾಮಗಳನ್ನೂ ತೆಗೆದುಕೊಂಡನು.
ಇದರ ತರುವಾಯ ದಾವೀದನು ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿ, ಅವರಿಂದ ಗತ್ ಪಟ್ಟಣವನ್ನೂ ಅದರ ಸುತ್ತಲಿನ ಗ್ರಾಮಗಳನ್ನೂ ತೆಗೆದುಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.
2 ಇದಲ್ಲದೆ ಅವನು ಮೋವಾಬ್ಯರನ್ನು ಸೋಲಿಸಿದನು. ಅವರು ದಾವೀದನಿಗೆ ದಾಸರಾಗಿ ಕಪ್ಪಕೊಡಬೇಕಾಯಿತು.
ಹಾಗೆಯೇ ಅವನು ಮೋವಾಬ್ಯರನ್ನು ಸಹ ಸೋಲಿಸಿದನು, ಮೋವಾಬ್ಯರು ದಾವೀದನಿಗೆ ಅಧೀನರಾಗಿ ಕಪ್ಪಕೊಡುವವರಾದರು.
3 ದಾವೀದನು ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ಚೋಬದ ಅರಸನಾದ ಹದರೆಜರನನ್ನು ಹಮಾತಿನ ಬಳಿಯಲ್ಲಿ ಸೋಲಿಸಿದನು.
ಇದಲ್ಲದೆ ದಾವೀದನು ಯೂಫ್ರೇಟೀಸ್ ನದಿಯ ಬಳಿಯಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವದಕ್ಕೆ ಹೋಗುತ್ತಿರುವಾಗ, ಹಮಾತಿನ ಬಳಿಯಲ್ಲಿ ಚೋಬದ ಅರಸನಾದ ಹದದೆಜೆರನನ್ನು ಸೋಲಿಸಿದನು.
4 ದಾವೀದನು ಅವನ ಸಾವಿರ ರಥಗಳನ್ನೂ, ಏಳುಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ಸೆರೆಹಿಡಿದು, ನೂರು ಕುದುರೆಗಳನ್ನಿಟ್ಟುಕೊಂಡು, ಉಳಿದ ಕುದುರೆಗಳ ಹಿಂಗಾಲಿನ ನರಗಳನ್ನು ಕತ್ತರಿಸಿ ಬಿಟ್ಟನು.
ದಾವೀದನು ಅವನಿಂದ ಸಾವಿರ ರಥಗಳನ್ನೂ, ಏಳು ಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ವಶಪಡಿಸಿಕೊಂಡನು. ನೂರು ರಥಗಳಿಗೆ ಕುದುರೆಗಳನ್ನು ಉಳಿಸಿ, ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ಯಿಸಿಬಿಟ್ಟನು.
5 ದಮಸ್ಕದ ಅರಾಮ್ಯರು ಚೋಬದ ಅರಸನಾದ ಹದದೆಜರನನ್ನು ರಕ್ಷಿಸಲು ಬಂದಾಗ ದಾವೀದನು ಅವರನ್ನೂ ಸೋಲಿಸಿ, ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದನು.
ದಮಸ್ಕದ ಅರಾಮ್ಯರು ಚೋಬದ ಅರಸ ಹದದೆಜೆರನಿಗೆ ಸಹಾಯಮಾಡಲು ಬಂದಾಗ, ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸಂಹರಿಸಿಬಿಟ್ಟನು.
6 ಇದಲ್ಲದೆ ಅವನು ದಮಸ್ಕದ ಅರಾಮ್ಯ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಹೀಗೆ ಅರಾಮ್ಯರು ಅವನ ಸೇವಕರಾಗಿ ಅವನಿಗೆ ಕಪ್ಪ ಕೊಡುವವರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ವಿಜಯ ದೊರಕಿತು.
ತರುವಾಯ ದಾವೀದನು ದಮಸ್ಕದ ಅರಾಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಹೀಗೆ ಅರಾಮ್ಯರು ದಾವೀದನಿಗೆ ಅಧೀನರಾಗಿ, ಕಪ್ಪವನ್ನು ಕೊಡುವವರಾದರು. ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.
7 ದಾವೀದನು ಹದರೆಜರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ಕಿತ್ತುಕೊಂಡು ಯೆರೂಸಲೇಮಿಗೆ ತೆಗೆದುಕೊಂಡು ಹೋದನು.
ಆಗ ದಾವೀದನು ಹದದೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು, ಅವುಗಳನ್ನು ಯೆರೂಸಲೇಮಿಗೆ ತಂದನು.
8 ಇದಲ್ಲದೆ ದಾವೀದನು ಹದರೆಜರನ ಟಿಭತ್ ಮತ್ತು ಕೂನ್ ಎಂಬ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡು ಹೋದನು. ಸೊಲೊಮೋನನು ಆ ತಾಮ್ರದಿಂದ ಕಂಚಿನ ಕಡಲೆಂಬ ಪಾತ್ರೆಯನ್ನೂ, ಕಂಬಗಳನ್ನೂ ಮತ್ತು ಬೇರೆ ಸಾಮಾನುಗಳನ್ನು ಇದೇ ತಾಮ್ರದಿಂದ ಮಾಡಿಸಿದನು.
ಇದಲ್ಲದೆ ಹದದೆಜೆರನ ಪಟ್ಟಣಗಳಾದ ಟಿಭತಿನಿಂದಲೂ, ಕೂನ್‌ದಿಂದಲೂ ದಾವೀದನು ಅತ್ಯಧಿಕವಾಗಿ ಕಂಚನ್ನು ತೆಗೆದುಕೊಂಡು ಬಂದನು. ಅದರಿಂದ ಸೊಲೊಮೋನನು ಕಂಚಿನ ಕೊಳವನ್ನೂ, ಸ್ತಂಭಗಳನ್ನೂ, ವಿವಿಧ ಪಾತ್ರೆಗಳನ್ನೂ ಮಾಡಿಸಿದನು.
9 ದಾವೀದನು ಚೋಬದ ಅರಸನಾದ ಹದದೆಜರನ ಸೈನ್ಯವನ್ನೆಲ್ಲಾ ಸೋಲಿಸಿದನೆಂಬ ವರ್ತಮಾನವು ಹಮಾತಿನ ಅರಸನಾದ ತೋವಿಗೆ ಮುಟ್ಟಿತು.
ದಾವೀದನು ಚೋಬದ ಅರಸನಾದ ಹದದೆಜೆರನ ಸಮಸ್ತ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನವನ್ನು ಹಮಾತಿನ ಅರಸನಾದ ತೋವು ಕೇಳಿದಾಗ,
10 ೧೦ ತೋವಿಗೂ ಹದರೆಜನಿಗೂ ವಿರೋಧವಿತ್ತು. ದಾವೀದನು ಹದದೆಜರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದರಿಂದ, ತೋವು ದಾವೀದನನ್ನು ವಂದಿಸುವುದಕ್ಕೂ, ಹಾರೈಸುವುದಕ್ಕೂ ತನ್ನ ಮಗನಾದ ಹದೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೋಸ್ಕರ ವಿಧವಿಧವಾದ ತಾಮ್ರ, ಬೆಳ್ಳಿ, ಬಂಗಾರಗಳ ಪಾತ್ರೆಗಳನ್ನು ತಂದನು.
ಅರಸನಾದ ದಾವೀದನ ಕ್ಷೇಮಸಮಾಚಾರವನ್ನು ವಿಚಾರಿಸಲೂ, ಹದದೆಜೆರನ ವಿರುದ್ಧ ಯುದ್ಧಮಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಅವನನ್ನು ಅಭಿನಂದಿಸಿ, ಹರಸುವಂತೆ, ತೋವು ತನ್ನ ಪುತ್ರನಾದ ಹದೋರಾಮನನ್ನು ಎಲ್ಲಾ ತರವಾದ ಬೆಳ್ಳಿ, ಬಂಗಾರ, ಕಂಚಿನ ಪಾತ್ರೆಗಳ ಸಹಿತವಾಗಿ ದಾವೀದನ ಬಳಿಗೆ ಕಳುಹಿಸಿದನು; ಏಕೆಂದರೆ ಹದದೆಜೆರನಿಗೆ ತೋವಿಯ ಸಂಗಡ ಯುದ್ಧಗಳಿದ್ದವು.
11 ೧೧ ಅರಸನಾದ ದಾವೀದನು ಇವುಗಳನ್ನೂ ಎದೋಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಮತ್ತು ಅಮಾಲೇಕ್ಯರು ಎಂಬೀ ಸುತ್ತಲಿನ ಜನಾಂಗಗಳಿಂದ ವಶಪಡಿಸಿಕೊಂಡ ಬೆಳ್ಳಿ ಬಂಗಾರವನ್ನು ಯೆಹೋವನಿಗೋಸ್ಕರ ಪ್ರತಿಷ್ಠಿಸಿದನು.
ಇವುಗಳನ್ನು ಅರಸನಾದ ದಾವೀದನು ಎದೋಮ್ಯರು, ಮೋವಾಬ್ಯರು, ಅಮ್ಮೋನ್ಯರು, ಫಿಲಿಷ್ಟಿಯರು, ಅಮಾಲೇಕ್ಯರು ಎಂಬ ಸಕಲ ಜನಾಂಗಗಳ ಬಳಿಯಿಂದ ತೆಗೆದುಕೊಂಡು ಬಂದ ಬೆಳ್ಳಿಬಂಗಾರವನ್ನು ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದನು.
12 ೧೨ ಇದಲ್ಲದೆ ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರ ಸೈನಿಕರನ್ನು ಸೋಲಿಸಿದನು.
ಇದಲ್ಲದೆ ಚೆರೂಯಳ ಮಗ ಅಬೀಷೈಯನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಎದೋಮ್ಯರ ಸೈನಿಕರನ್ನು ಕೊಂದನು.
13 ೧೩ ದಾವೀದನು ಎದೋಮಿನಲ್ಲಿ ಕಾವಲುದಂಡುಗಳನ್ನಿರಿಸಿದನು. ಎದೋಮ್ಯರೆಲ್ಲರೂ ದಾವೀದನ ದಾಸರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯದೊರಕಿತು.
ಎದೋಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಇದರಿಂದ, ಎದೋಮ್ಯರೆಲ್ಲರು ದಾವೀದನಿಗೆ ಅಧೀನರಾದರು. ದಾವೀದನು ಹೋದಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.
14 ೧೪ ದಾವೀದನು ಇಸ್ರಾಯೇಲರೆಲ್ಲರ ಅರಸನಾಗಿ ಎಲ್ಲಾ ಪ್ರಜೆಗಳಿಗೂ ಧರ್ಮತಪ್ಪದೆ ನೀತಿ ಮತ್ತು ನ್ಯಾಯದಿಂದ ಕಾರ್ಯ ನಿರ್ವಹಿಸುತ್ತಿದ್ದನು.
ಹೀಗೆಯೇ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ ತನ್ನ ಸಮಸ್ತ ಜನರಿಗೂ ನೀತಿ ನ್ಯಾಯಗಳಿಂದ ನಡೆಸುತ್ತಿದ್ದನು.
15 ೧೫ ಚೆರೂಯಳ ಮಗನಾದ ಯೋವಾಬನು ಅವನ ಸೇನಾಧಿಪತಿಯೂ, ಅಹೀಲೂದನ ಮಗನಾದ ಯೆಹೋಷಾಫಾಟನು ಮಂತ್ರಿಯೂ ಆಗಿದ್ದರು.
ಚೆರೂಯಳ ಮಗ ಯೋವಾಬನು ಸೈನ್ಯದ ಅಧಿಪತಿಯಾಗಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನಾಗಿದ್ದನು.
16 ೧೬ ಅಹೀಟೂಬನ ಮಗನಾದ ಚಾದೋಕನೂ ಮತ್ತು ಅಬೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರಾಗಿದ್ದರು. ಶವ್ಷನು ಲೇಖಕನು.
ಅಹೀಟೂಬನ ಮಗ ಚಾದೋಕನೂ, ಅಬಿಯಾತರನ ಮಗ ಅಹೀಮೆಲೆಕನೂ ಯಾಜಕರಾಗಿದ್ದರು. ಶವ್ಷನು ಕಾರ್ಯದರ್ಶಿಯಾಗಿದ್ದನು.
17 ೧೭ ಯೆಹೋಯಾದನ ಮಗನಾದ ಬೆನಾಯನು, ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳ ಮುಖ್ಯಸ್ಥನಾದನು. ದಾವೀದನ ಮಕ್ಕಳು ಅರಸನ ಒಡ್ಡೋಲಗದಲ್ಲಿ ಪ್ರಧಾನರಾಗಿದ್ದರು.
ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರ ಮೇಲೆಯೂ, ಪೆಲೇತ್ಯರ ಮೇಲೆಯೂ ಮುಖ್ಯಸ್ಥನಾಗಿದ್ದನು. ದಾವೀದನ ಪುತ್ರರು ಅರಸನ ಬಳಿಯಲ್ಲಿ ಪ್ರಧಾನರಾಗಿದ್ದರು.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 18 >