< ಯೆಹೆಜ್ಕೇಲನು 7 >

1 ಯೆಹೋವ ದೇವರ ವಾಕ್ಯವು ನನಗೆ ಬಂದಿತು: 2 “ಮನುಷ್ಯಪುತ್ರನೇ, ಸಾರ್ವಭೌಮ ಯೆಹೋವ ದೇವರು ಇಸ್ರಾಯೇಲ್ ದೇಶಕ್ಕೆ ಹೀಗೆ ಹೇಳುತ್ತಾರೆ: “‘ಅಂತ್ಯವು ಬಂದಿದೆ! ಈ ದೇಶದ ನಾಲ್ಕು ಮೂಲೆಗಳಲ್ಲಿಯೂ ಅಂತ್ಯವು ಬಂದಿದೆ! 3 ಈಗಲೇ ನಿನಗೆ ಅಂತ್ಯವು ಬಂದಿದೆ. ನನ್ನ ಕೋಪವನ್ನು ನಿನ್ನ ಮೇಲೆ ಬರಮಾಡುತ್ತೇನೆ. ನಿನ್ನ ನಡತೆಯ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯ ಕಾರ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿತೀರಿಸುವೆನು. 4 ನನ್ನ ಕಣ್ಣುಗಳು ನಿನ್ನನ್ನು ಕನಿಕರಿಸುವುದೂ ಇಲ್ಲ. ನಾನು ನಿನ್ನನ್ನು ಬಿಡುವುದೂ ಇಲ್ಲ. ಆದರೆ ನಿನ್ನ ದುರ್ಮಾರ್ಗಗಳ ಪ್ರಕಾರ, ನಿನ್ನ ಮೇಲೆ ಮುಯ್ಯಿ ತೀರಿಸುತ್ತೇನೆ. ನಿನ್ನ ಅಸಹ್ಯ ಕಾರ್ಯಗಳು ನಿನ್ನ ಮಧ್ಯೆ ಇರುವುವು. ಆಗ ನಾನೇ ಯೆಹೋವ ದೇವರು ಎಂದು ನಿಮಗೆ ತಿಳಿಯುವುದು.’ 5 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ಕೇಡು! ಎಂದೂ ಕೇಳದ ಕೇಡು, ಇಗೋ ಬಂದಿತು. 6 ಅಂತ್ಯವು ಬಂದಿತು, ಅಂತ್ಯವು ಬಂದುಬಿಟ್ಟಿತು, ನಿನ್ನನ್ನು ಚಚ್ಚುವುದಕ್ಕೆ ಎಚ್ಚರಗೊಂಡಿದೆ, ಇಗೋ ಬಂದೇ ಬಂತು. 7 ಓ ದೇಶ ನಿವಾಸಿಯೇ, ನಿನಗಾಗಿ ವಿನಾಶದ ದಿನ ಬಂದಿತು, ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು. ಪರ್ವತಗಳ ಮೇಲೆ ಸಂತೋಷವಲ್ಲ ಭೀತಿಯಿದೆ. 8 ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ರೋಷವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿ ಬಿಡುವೆನು. ನಾನು ನಿನ್ನ ನಡತೆಯ ಪ್ರಕಾರ ಮುಯ್ಯಿತೀರಿಸುವೆನು. ನಿನ್ನ ಎಲ್ಲಾ ಅಸಹ್ಯಕಾರ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿತೀರಿಸುವೆನು. 9 ನಾನು ಕಟಾಕ್ಷಿಸುವುದೂ ಇಲ್ಲ, ನಿನ್ನನ್ನು ಕನಿಕರಿಸುವುದೂ ಇಲ್ಲ. ನಿನ್ನ ನಡತೆಗಳಿಗೂ, ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ ತಕ್ಕ ಹಾಗೆ ನಿನಗೆ ಮುಯ್ಯಿ ತೀರಿಸುತ್ತೇನೆ. ಆಗ ನಾನೇ ಹೊಡೆಯುತ್ತಿರುವ ಯೆಹೋವ ದೇವರೆಂದು ನಿಮಗೆ ತಿಳಿಯುವುದು. 10 “‘ಇಗೋ ಆ ದಿನವು ಬಂತು, ನೋಡು ವಿನಾಶದ ದಿನ ಹೊರಟುಹೋಯಿತು, ಕೋಲು ಚಿಗುರಿತು, ಅಹಂಕಾರವು ಅರಳಿತು, 11 ಬಲಾತ್ಕಾರವು ದುಷ್ಟತನದ ಕೋಲಿನಲ್ಲಿ ಬೆಳೆದಿತ್ತು. ಅವರಲ್ಲಿಯೂ ಅವರ ಜನಸಮೂಹದಲ್ಲಿಯೂ, ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವುದಿಲ್ಲ, ಅವರಲ್ಲಿ ಯಾವ ಮೌಲ್ಯವು ಇರುವುದಿಲ್ಲ. 12 ಸಮಯವು ಬಂತು, ದಿನವು ಬಂದೇಬಿಟ್ಟಿತು. ಕೊಂಡುಕೊಳ್ಳುವವನಿಗೆ ಸಂತೋಷವಿಲ್ಲದಿರಲಿ, ಮಾರುವವನು ದುಃಖಿಸದಿರಲಿ. ಏಕೆಂದರೆ ಆ ಎಲ್ಲಾ ಜನಸಮೂಹದ ಮೇಲೆ ನನ್ನ ರೌದ್ರವಿದೆ. 13 ಮಾರಿದವನು ಎಷ್ಟು ವರ್ಷ ಬದುಕಿದರೂ, ಮಾರಿದ ಸೊತ್ತು ಅವನ ವಶಕ್ಕೆ ತಿರುಗಿ ಬಾರದು. ಉಂಟಾದ ದಿವ್ಯದರ್ಶನ ಸಮಾಜದವರಿಗೆಲ್ಲಾ ಸಂಬಂಧಿಸಿದೆ, ಎಂದಿಗೂ ತಿರುಗದು, ಯಾರೂ ತಮ್ಮ ಪಾಪಗಳಿಂದ ತಮ್ಮ ಜೀವವನ್ನು ಉಳಿಸಿಕೊಳ್ಳರು. 14 “‘ಅವರು ಕಹಳೆಯನ್ನೂದಿ ಎಲ್ಲವನ್ನೂ ಸಿದ್ಧ ಮಾಡಿಕೊಂಡಿದ್ದಾರೆ. ಆದರೆ ಯಾರೂ ಯುದ್ಧಕ್ಕೆ ಹೋಗುವುದಿಲ್ಲ. ಏಕೆಂದರೆ ಆ ಎಲ್ಲಾ ಜನಸಮೂಹದ ಮೇಲೆ ನನ್ನ ಕೋಪವಿದೆ. 15 ಹೊರಗೆ ಖಡ್ಗವೂ ಒಳಗೆ ವ್ಯಾಧಿಯೂ ಕ್ಷಾಮವೂ ಉಂಟು. ಹೊರಗಿರುವವರನ್ನು ಖಡ್ಗವು ಸಾಯಿಸುವುದು, ಪಟ್ಟಣದಲ್ಲಿರುವವರನ್ನು ವ್ಯಾಧಿಯೂ ಕ್ಷಾಮವೂ ತಿಂದುಬಿಡುವುದು. 16 ಆದರೆ ಅವರಲ್ಲಿ ಪಲಾಯನ ಮಾಡಿದವರು ತಪ್ಪಿಸಿಕೊಳ್ಳುವರು. ಪ್ರತಿಯೊಬ್ಬರೂ ತಮ್ಮ ತಮ್ಮ ಅಕ್ರಮಗಳ ನಿಮಿತ್ತ ಕಣಿವೆಯಲ್ಲಿರುವ ಪಾರಿವಾಳದ ಹಾಗೆ ಗೋಳಾಡಿ, ಪರ್ವತಗಳ ಮೇಲೆ ಇರುವರು. 17 ಕೈಗಳೆಲ್ಲಾ ಜೋತಾಡುವುವು, ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ಆಗುವುವು. 18 ಅವರು ತಮ್ಮಲ್ಲಿ ಗೋಣಿತಟ್ಟುಗಳನ್ನು ಕಟ್ಟಿಕೊಳ್ಳುವರು ಮತ್ತು ಭಯವು ಅವರನ್ನು ಮುಚ್ಚಿಬಿಡುವುದು. ಎಲ್ಲಾ ಮುಖಗಳ ಮೇಲೆ ನಾಚಿಕೆಯೂ, ಅವರ ಎಲ್ಲಾ ತಲೆಗಳು ಬೋಳಾಗಿಯೂ ಇರುವುವು. 19 “‘ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧ ವಸ್ತುವಿನಂತಿರುವುದು. ಅವರ ಬೆಳ್ಳಿ ಬಂಗಾರಗಳು ಯೆಹೋವ ದೇವರ ಕೋಪದ ದಿವಸದಲ್ಲಿ ಅವರನ್ನು ಪಾರು ಮಾಡಲಾರವು. ಇದರಿಂದ ಅವರ ಹಸಿವು ನೀಗುವುದಿಲ್ಲ, ಅವರ ಹೊಟ್ಟೆಗಳನ್ನು ತುಂಬಿಸುವುದಿಲ್ಲ. ಏಕೆಂದರೆ ಅವರ ಆಸ್ತಿಯು ಪಾಪ ಕೃತ್ಯಗಳಿಗೆ ಕಾರಣವಾಗಿತ್ತು. 20 ಅವರ ಆಭರಣಗಳ ಚಂದವು ಅವರಿಗೆ ಗರ್ವಕ್ಕೆ ಆಸ್ಪದವಾಯಿತು. ಇದಲ್ಲದೆ ಹೇಯವೂ ಅಸಹ್ಯವೂ ಆದ ತಮ್ಮ ದೇವತೆಗಳ ಪ್ರತಿಮೆಗಳನ್ನು ಬೆಳ್ಳಿಬಂಗಾರದಿಂದ ರೂಪಿಸುತ್ತಿದ್ದರು. ಆದಕಾರಣ ಅದನ್ನು ಅವರಿಗೆ ಅಶುದ್ಧಪದಾರ್ಥವನ್ನಾಗಿ ಮಾಡಿ 21 ನಾನು ಅದನ್ನು ವಿದೇಶಿಯರ ಕೈಗೆ ಕೊಳ್ಳೆಯಾಗಿಯೂ, ಭೂಮಿಯ ದುಷ್ಟರಿಗೆ ಸೂರೆಯಾಗಿಯೂ ಒಪ್ಪಿಸುವೆನು. ಅವರು ಅದನ್ನು ಅಪವಿತ್ರಪಡಿಸುವರು. 22 ನನ್ನ ಮುಖವನ್ನು ನಾನು ಅವರ ಕಡೆಯಿಂದ ತಿರುಗಿಸುವೆನು. ನನ್ನ ಅತ್ಯಂತ ಅಮೂಲ್ಯ ಸ್ಥಳವನ್ನು ಅಪವಿತ್ರಪಡಿಸುವರು. ದರೋಡೆಕೋರರು ಅದರಲ್ಲಿ ಸೇರಿ ಅದನ್ನು ಅಪವಿತ್ರಪಡಿಸುವರು. 23 “‘ಸರಪಳಿಯನ್ನು ತಯಾರುಮಾಡು. ದೇಶವು ರಕ್ತಾಪರಾಧದಿಂದ ತುಂಬಿದೆ ಮತ್ತು ನಗರವು ಹಿಂಸೆಯಿಂದ ತುಂಬಿದೆ. 24 ಆದಕಾರಣ ನಾನು ಇತರ ಜನಾಂಗಗಳಲ್ಲಿ ಕೆಟ್ಟವರನ್ನು ತರುತ್ತೇನೆ ಮತ್ತು ಅವರು ಅವರ ಮನೆಗಳನ್ನು ವಶಪಡಿಸಿಕೊಳ್ಳುವರು. ನಾನು ಬಲಿಷ್ಠರ ಅಹಂಕಾರವನ್ನು ನಿಲ್ಲಿಸುತ್ತೇನೆ. ಅವರ ಪರಿಶುದ್ಧ ಸ್ಥಳಗಳು ಅಪವಿತ್ರವಾಗುವುವು. 25 ನಾಶವು ಬರುತ್ತದೆ. ಅವರು ಸಮಾಧಾನವನ್ನು ಹುಡುಕುತ್ತಾರೆ, ಆದರೆ ಅದು ಇರುವುದಿಲ್ಲ. 26 ಕೇಡಿನ ಮೇಲೆ ಕೇಡು ಬರುವುದು, ಸುದ್ದಿಯ ಮೇಲೆ ಸುದ್ದಿ ಬರುವುದು, ಅವರು ಪ್ರವಾದಿಯಿಂದ ದರ್ಶನವನ್ನು ಹುಡುಕುವರು. ಆದರೆ ಯಾಜಕರಿಂದ ನಿಯಮ ಬೋಧನೆಯು ಅಡಗಿಹೋಗುವುದು, ಹಿರಿಯರಿಂದ ಸಮಾಲೋಚನೆಯು ಇಲ್ಲವಾಗುವುದು. 27 ಅರಸನು ದುಃಖಿಸುವನು, ರಾಜಕುಮಾರನಿಗೆ ನಿರಾಶೆಯು ಅವನ ಉಡುಪಾಗಿರುತ್ತದೆ. ದೇಶದ ಜನರ ಕೈಗಳು ತತ್ತರಿಸುವುವು, ಅವರ ದುರ್ನಡತೆಗೆ ತಕ್ಕ ಪ್ರತೀಕಾರ ಮಾಡುವೆನು. ಅವರ ದುಷ್ಕರ್ಮಗಳ ಪ್ರಕಾರ ಅವರಿಗೆ ನ್ಯಾಯತೀರಿಸುವೆನು. “‘ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’”

< ಯೆಹೆಜ್ಕೇಲನು 7 >