< ಯೆಹೆಜ್ಕೇಲನು 12 >

1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
2 “ಮನುಷ್ಯಪುತ್ರನೇ, ನೀನು ತಿರುಗಿಬೀಳುವ ಮನೆತನದವರ ಮಧ್ಯದಲ್ಲಿ ವಾಸಿಸುತ್ತಿರುವ, ಅವರಿಗೆ ನೋಡುವುದಕ್ಕೆ ಕಣ್ಣುಗಳುಂಟು, ಆದರೆ ನೋಡುವುದಿಲ್ಲ; ಕೇಳುವುದಕ್ಕೆ ಕಿವಿಗಳುಂಟು, ಕೇಳುವುದಿಲ್ಲ. ಅವರು ತಿರುಗಿಬೀಳುವ ಮನೆತನದವರು.
“ನರಪುತ್ರನೇ, ನೀನು ದ್ರೋಹಿ ವಂಶದ ಮಧ್ಯದಲ್ಲಿ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು.
3 “ಆದ್ದರಿಂದ ಮನುಷ್ಯಪುತ್ರನೇ, ನೀನು ಸಲಕರಣೆಗಳನ್ನು ಸಿದ್ಧಮಾಡಿ, ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿಹೋಗು, ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು. ಅವರು ದ್ರೋಹಿಗಳಾದವರ ಮನೆತನದವರಾದರೂ, ಒಂದು ವೇಳೆ ಅರ್ಥಮಾಡಿಕೊಳ್ಳಬಹುದು.
“ನರಪುತ್ರನೇ, ವಲಸೆಹೋಗುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣೆದುರಿಗೆ ಹೊರಡು ಅಂದರೆ ನಿನ್ನ ವಾಸಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು. ಅವರು ದ್ರೋಹಿ ವಂಶದವರಾಗಿದ್ದರೂ ಒಂದು ವೇಳೆ ತಮ್ಮ ದ್ರೋಹವನ್ನು ಮನಸ್ಸಿಗೆ ತಂದುಕೊಳ್ಳಬಹುದು.
4 ನಿನ್ನ ಸಲಕರಣೆಗಳನ್ನು ತೆಗೆದುಕೊಂಡು ಹೋಗಲು ಅವುಗಳನ್ನು ಹಗಲಿನಲ್ಲಿ ಅವರ ಕಣ್ಣುಗಳ ಮುಂದೆ ಹೊರಗೆ ತರಬೇಕು. ಸಂಜೆಯಲ್ಲಿ ಸೆರೆಗೆ ಹೋಗುವವರ ಹಾಗೆ
ನೀನು ನಿನ್ನ ಸಾಮಗ್ರಿಗಳನ್ನು, ವಲಸೆಯ ಸಾಮಗ್ರಿಗಳನ್ನೋ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಆಚೆಗೆ ಹಾಕಿ, ವಲಸೆ ಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮದಲ್ಲಿ ಹೊರಟು ಹೋಗು.
5 ನೀನು ಅವರ ಕಣ್ಣುಗಳ ಮುಂದೆಯೇ ಗೋಡೆಯನ್ನು ಕೊರೆದು, ಅಲ್ಲಿಂದ ನಿನ್ನ ಸಲಕರಣೆಗಳನ್ನು ಹೊತ್ತುಕೊಂಡು ಹೊರಗೆ ಹೊರಟು ಹೋಗು.
ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು.
6 ಅವರ ಕಣ್ಣುಗಳ ಮುಂದೆ ಸಲಕರಣೆಗಳನ್ನು ಹೆಗಲಿನ ಮೇಲೆ ಹೊತ್ತುಕೊಂಡು ಮುಸ್ಸಂಜೆಯಲ್ಲಿ ಹೋಗಬೇಕು; ನೆಲವನ್ನು ನೋಡದ ಹಾಗೆ ನಿನ್ನ ಮುಖವನ್ನು ಮುಚ್ಚಿಕೊಳ್ಳಬೇಕು. ನಾನು ನಿನ್ನನ್ನು ಇಸ್ರಾಯೇಲಿನ ಮನೆತನದಲ್ಲಿರುವವರಿಗೆ ಗುರುತನ್ನಾಗಿ ಇಟ್ಟಿದ್ದೇನೆ.”
ಅವರ ಕಣ್ಣ ಮುಂದೆ, ಅದನ್ನು ಹೆಗಲ ಮೇಲೆ ಹಾಕಿ, ಕತ್ತಲಲ್ಲಿ ಹೊತ್ತುಕೊಂಡು ಹೋಗು; ನೆಲವನ್ನು ನೋಡದಂತೆ ಮುಖವನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಗುರುತನ್ನಾಗಿ ಮಾಡಿದ್ದೇನೆ.”
7 ನಾನು ಆಜ್ಞೆಯನ್ನು ಹೊಂದಿದ ಪ್ರಕಾರ ಮಾಡಿದೆನು. ನನ್ನ ಸರಕುಗಳನ್ನು ಹಗಲಿನಲ್ಲಿಯೇ ಹೊರಗೆ ತಂದೆನು. ಸಂಜೆಯಲ್ಲಿ ನನ್ನ ಕೈಯಿಂದಲೇ ಗೋಡೆಯನ್ನು ಕೊರೆದೆನು. ಅದನ್ನು ನಾನು ಮುಸ್ಸಂಜೆಯಲ್ಲಿ ಹೊರಗೆ ತಂದು, ಅವರ ಕಣ್ಣುಗಳ ಮುಂದೆ ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದೆನು.
ಆಗ ನಾನು ನನಗಾದ ಅಪ್ಪಣೆಯನ್ನು ನೆರವೇರಿಸಿದೆನು; ಹಗಲಿನಲ್ಲಿ ನನ್ನ ಸಾಮಗ್ರಿಗಳನ್ನು, ವಲಸೆಯ ಸಾಮಗ್ರಿಯನ್ನೋ ಎಂಬಂತೆ ಮನೆಯೊಳಗಿಂದ ಆಚೆಗೆ ಹಾಕಿ, ಸಾಯಂಕಾಲ ನನ್ನ ಕೈಯಿಂದಲೇ ಗೋಡೆಯಲ್ಲಿ ಕಿಂಡಿಯನ್ನು ಮಾಡಿ, ಕತ್ತಲಲ್ಲಿ ಆ ಸಾಮಾನನ್ನು ಆಚೆಗೆ ಸಾಗಿಸಿ, ಅವರ ಕಣ್ಣ ಮುಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದೆನು.
8 ಬೆಳಗಿನ ಜಾವದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
ಬೆಳಿಗ್ಗೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
9 “ಮನುಷ್ಯಪುತ್ರನೇ, ದ್ರೋಹಿ ವಂಶದವರಾದ ಇಸ್ರಾಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೇ?
“ನರಪುತ್ರನೇ, ದ್ರೋಹಿ ವಂಶದವರಾದ ಇಸ್ರಾಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೆ?
10 “ಅವರಿಗೆ ನೀನು ಹೀಗೆ ಹೇಳಬೇಕೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ: ಈ ಪ್ರವಾದನೆಯು ಯೆರೂಸಲೇಮಿನಲ್ಲಿರುವ ಪ್ರಭುವನ್ನೂ, ಅದರಲ್ಲಿರುವ ಸಮಸ್ತ ಇಸ್ರಾಯೇಲಿನ ಮನೆತನದವರನ್ನೂ ಕುರಿತದ್ದಾಗಿದೆ.
೧೦ನೀನು ಅವರಿಗೆ ಹೀಗೆ ನುಡಿ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಈ ಹೊರೆಯು ಯೆರೂಸಲೇಮಿನಲ್ಲಿರುವ ರಾಜನಿಗೂ, ಅಲ್ಲಿನ ಇಸ್ರಾಯೇಲ್ ವಂಶದವರೆಲ್ಲರಿಗೂ ಸಂಬಂಧಪಟ್ಟಿದೆ.’
11 ಅವರಿಗೆ ಹೀಗೆ ಹೇಳು, ‘ನಾನು ನಿಮಗೆ ಗುರುತಾಗಿದ್ದೇನೆ.’ “ನಾನು ಮಾಡಿದ ಹಾಗೆ ಅವರಿಗೆ ಮಾಡಲಾಗುವುದು. ಅವರು ಗುಲಾಮರಾಗಿ ಸೆರೆಗೆ ಹೋಗುವರು.
೧೧ಇದನ್ನೂ ನುಡಿ, ‘ನಾನು ನಿಮಗೆ ಗುರುತಾಗಿದ್ದೇನೆ; ನಾನು ಮಾಡಿದಂತೆಯೇ ಅವರಿಗಾಗುವುದು; ಅವರು ವಲಸೆಯಾಗಿ ಸೆರೆ ಹೋಗುವರು.
12 “ಅವರ ಮಧ್ಯದಲ್ಲಿರುವ ರಾಜಪುತ್ರನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಮುಸ್ಸಂಜೆಯಲ್ಲಿ ಹೊರಟು ಹೋಗುವನು. ಅವರು ಗೋಡೆಯನ್ನು ಕೊರೆದು, ಆ ಕಿಂಡಿಯ ಮೂಲಕ ತಮ್ಮ ಸಲಕರಣೆಗಳನ್ನು ಹೊರಗೆ ಸಾಗಿಸುವರು. ಅವನು ತನ್ನ ಕಣ್ಣುಗಳಿಂದ ನೆಲವನ್ನು ನೋಡದ ಹಾಗೆ ಮುಖವನ್ನು ಮುಚ್ಚಿಕೊಳ್ಳುವನು.
೧೨ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಆಚೆಗೆ ಸಾಗಿಸುವರು; ಅವನು ಮುಖವನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸುವುದಿಲ್ಲ.’
13 ನನ್ನ ಬಲೆಯನ್ನೂ ಸಹ ನಾನು ಅವನ ಮೇಲೆ ಹರಡುವೆನು. ಅವನು ನನ್ನ ಉರುಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಕಸ್ದೀಯರ ನಾಡಾದ ಬಾಬಿಲೋನಿಗೆ ಒಯ್ಯುವೆನು. ಆದರೆ ಅವನು ಅದನ್ನು ನೋಡದೆ ಅಲ್ಲಿಯೇ ಸಾಯುವನು.
೧೩ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು; ಕಸ್ದೀಯರ ದೇಶವಾದ ಬಾಬಿಲೋನಿಗೆ ಅವನನ್ನು ಒಯ್ಯುವೆನು, ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡುವುದಿಲ್ಲ.
14 ಅವನ ಸುತ್ತಲೂ ಅವನಿಗೆ ಸಹಾಯ ಮಾಡುವವರೆಲ್ಲರನ್ನೂ, ಅವನ ಎಲ್ಲಾ ಸೈನ್ಯಗಳನ್ನೂ, ಎಲ್ಲಾ ದಿಕ್ಕುಗಳಿಗೆ ಚದರಿಸಿ, ಅವರ ಹಿಂದೆ ಖಡ್ಗವನ್ನು ಬೀಸುವೆನು.
೧೪ಅವನ ಸುತ್ತಲಿನ ಸಕಲ ಸಹಾಯಕರನ್ನೂ, ಅವನ ಸಮಸ್ತ ವ್ಯೂಹಗಳವರನ್ನೂ ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
15 “ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿ, ದೇಶಗಳ ಮೇಲೆ ಚೆಲ್ಲಾಪಿಲ್ಲಿಮಾಡುವಾಗ, ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವರು.
೧೫“ನಾನು ಅವರನ್ನು ಜನಾಂಗಗಳೊಳಗೆ ಚದರಿಸಿಬಿಟ್ಟು ಅನ್ಯದೇಶಗಳಲ್ಲಿ ಚೆಲ್ಲಾಪಿಲ್ಲಿ ಮಾಡುವಾಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.
16 ಆದರೆ ಅವರು ಎಲ್ಲಿ ಹೋಗುವರೋ, ಆ ಜನಾಂಗಗಳೊಳಗೆ ಅವರ ಹೇಯ ಕಾರ್ಯಗಳನ್ನು ಇವರು ತಿಳಿದುಕೊಳ್ಳುವಂತೆ ಅವರಲ್ಲಿ ಕೆಲವರನ್ನು ಖಡ್ಗದಿಂದಲೂ ಬರಗಾಲದಿಂದಲೂ ವ್ಯಾಧಿಯಿಂದಲೂ ಉಳಿಸುವೆನು. ಆಗ ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವರು.”
೧೬ನಾನು ಕೆಲವರನ್ನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಉಳಿಸಿ ಅವರು ತಮ್ಮ ಅಸಹ್ಯ ಕಾರ್ಯಗಳ ವಿಷಯವನ್ನು ತಾವು ಸೇರಿದ ಜನಾಂಗಗಳಲ್ಲಿ ತಿಳಿಸುವುದಕ್ಕೆ ಅವಕಾಶ ಮಾಡುವೆನು; ನಾನೇ ಯೆಹೋವನು ಎಂದು ಆ ಜನಾಂಗಗಳಿಗೂ ಗೊತ್ತಾಗುವುದು.”
17 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
೧೭ಇದಲ್ಲದೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
18 “ಮನುಷ್ಯಪುತ್ರನೇ, ಆಹಾರವನ್ನು ನಡುಗುತ್ತಾ ಊಟಮಾಡು ಮತ್ತು ನೀರನ್ನು ನಡುಗುವಿಕೆಯಿಂದಲೂ, ಎಚ್ಚರಿಕೆಯಿಂದಲೂ ಕುಡಿ.
೧೮“ನರಪುತ್ರನೇ, ನೀನು ಅನ್ನವನ್ನು ನಡುಗುತ್ತಾ ತಿನ್ನು ಮತ್ತು ನೀರನ್ನು ಹೆದರಿಕೆಯಿಂದ ಕುಡಿ.
19 ನಿನ್ನ ದೇಶದ ಜನರಿಗೆ ಹೀಗೆ ಹೇಳು, ‘ಯೆರೂಸಲೇಮಿನ ನಿವಾಸಿಗಳಿಗೆ ಮತ್ತು ಇಸ್ರಾಯೇಲರ ದೇಶಕ್ಕೆ ಸಾರ್ವಭೌಮ ಯೆಹೋವ ದೇವರು ಹೇಳಿದ್ದೇನೆಂದರೆ, ಅವರು ತಮ್ಮ ರೊಟ್ಟಿಯನ್ನು ಎಚ್ಚರಿಕೆಯಿಂದಲೇ ತಿನ್ನುವರು, ನೀರನ್ನು ಅಂಜಿಕೆಯಿಂದಲೇ ಕುಡಿಯುವರು. ಅದರಲ್ಲಿ ವಾಸವಾಗಿರುವವರೆಲ್ಲರ ಹಿಂಸಾಚಾರದಿಂದ ಅವರ ದೇಶವು ಸೊತ್ತನ್ನೆಲ್ಲಾ ಕಳೆದುಕೊಂಡು ಹಾಳಾಗುವುದು.
೧೯ಆ ದೇಶದಲ್ಲಿರುವ ಜನರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಸ್ರಾಯೇಲ್ ದೇಶದ ಯೆರೂಸಲೇಮಿನ ನಿವಾಸಿಗಳ ವಿಷಯವಾಗಿ ಇಂತೆನ್ನುತ್ತಾನೆ, ಅವರು ಅನ್ನವನ್ನು ನಡಗುತ್ತಾ ತಿನ್ನುವರು ಮತ್ತು ನೀರನ್ನು ಹೆದರಿಕೆಯಿಂದ ಕುಡಿಯುವರು; ಏಕೆಂದರೆ ಆ ದೇಶದವರೆಲ್ಲರು ಬಲಾತ್ಕಾರಿಗಳಾಗಿರುವುದರಿಂದ ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ, ದೇಶವು ಬರಿದಾಗುವುದು.
20 ನಿವಾಸಿಗಳುಳ್ಳ ಪಟ್ಟಣಗಳು ಹಾಳಾಗುವುವು. ದೇಶವು ನಿರ್ಜನವಾಗುವುದು. ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.’”
೨೦ಆಗ ಜನ ತುಂಬಿದ ಊರುಗಳು ಹಾಳಾಗಿ ದೇಶವು ಬೀಡುಬೀಳುವುದು; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.’”
21 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
೨೧ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
22 “ಮನುಷ್ಯಪುತ್ರನೇ, ‘ದಿನಗಳು ಬಹಳವಾಗುತ್ತಿವೆ. ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂದು ಇಸ್ರಾಯೇಲ್ ದೇಶದಲ್ಲಿ ಹೇಳಿಕೊಳ್ಳುವ ಈ ಗಾದೆ ಏನು’?
೨೨“ನರಪುತ್ರನೇ, ಕ್ಲುಪ್ತಕಾಲವು ದೂರ ಹೋಗುತ್ತಲಿದೆ; ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂಬುದಾಗಿ ಇಸ್ರಾಯೇಲ್ ದೇಶದವರು ಆಡಿಕೊಳ್ಳುವ ಈ ಗಾದೆ ಮಾತು ಎಂಥದ್ದು?”
23 ಆದ್ದರಿಂದ ಅವರಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನಾನು ಈ ಗಾದೆಯನ್ನು ನಿಲ್ಲಿಸುತ್ತೇನೆ. ಅದನ್ನು ಇನ್ನು ಮೇಲೆ ಇಸ್ರಾಯೇಲಿನಲ್ಲಿ ಗಾದೆಯಂತೆ ಉಪಯೋಗಿಸುವುದಿಲ್ಲ. ದಿನಗಳು ಹತ್ತಿರವಾಗಿವೆ. ಪ್ರತಿದರ್ಶನವು ನೆರವೇರಲಿದೆ’ ಎಂದು ಅವರಿಗೆ ಹೇಳು.
೨೩ಅವರಿಗೆ ಹೀಗೆ ಹೇಳು, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ನಾನು ಈ ಗಾದೆಯನ್ನು ಬಳಸುವುದನ್ನು ನಿಲ್ಲಿಸಿಬಿಡುವೆನು, ಅದು ಇಸ್ರಾಯೇಲಿನಲ್ಲಿ ಇನ್ನು ಸಲ್ಲದು; ನಾನು ನುಡಿಯುವ ಈ ಮಾತನ್ನು ಕೇಳಿರಿ, ‘ಕ್ಲುಪ್ತಕಾಲವು ಸಮೀಪಿಸಿದೆ, ದಿವ್ಯದರ್ಶನಗಳೆಲ್ಲಾ ಸಾರ್ಥಕವಾಗುವ ಕಾಲ ಸಮೀಪಿಸಿದೆ.
24 ‘ಇಸ್ರಾಯೇಲಿನ ಮನೆತನದವರೊಳಗೆ ಇನ್ನು ಮೇಲೆ ಯಾವ ಸುಳ್ಳು ದರ್ಶನವೂ, ಮೋಸದ ಶಕುನವೂ ಇರುವುದಿಲ್ಲ.
೨೪ಇನ್ನು ಮೇಲೆ ಇಸ್ರಾಯೇಲ್ ವಂಶದವರಲ್ಲಿ ಯಾರಿಗೂ ಸುಳ್ಳು ದರ್ಶನವಾಗದು, ಮೋಸದ ಕಣಿಯೂ ಇರದು.
25 ನಾನೇ ಯೆಹೋವ ದೇವರು, ನಾನೇ ಮಾತನಾಡುತ್ತೇನೆ. ನಾನು ಆಡುವ ಮಾತು ನೆರವೇರುವುದು; ಅದು ಇನ್ನು ನಿಧಾನವಾಗುವುದಿಲ್ಲ. ದ್ರೋಹಿಗಳಾದ ಮನೆತನದವರೇ, ನಿಮ್ಮ ದಿವಸಗಳಲ್ಲಿ ನಾನು ನುಡಿದದ್ದನ್ನು ನಡೆಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’”
೨೫ನಾನೇ ಯೆಹೋವನು; ನಾನು ನುಡಿದೇ ನುಡಿಯುವೆನು; ನಾನು ನುಡಿದ ಮಾತು ನೆರವೇರುವುದು, ಇನ್ನು ನಿಧಾನವಾಗದು; ದ್ರೋಹಿ ವಂಶದವರೇ, ನಾನು ನಿಮ್ಮ ಕಾಲದಲ್ಲಿ ನುಡಿಯುವುದು ಮಾತ್ರವಲ್ಲದೆ ನುಡಿದದ್ದನ್ನು ನೆರವೇರಿಸುವೆನು’” ಇದು ಕರ್ತನಾದ ಯೆಹೋವನ ವಾಕ್ಯ.
26 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
೨೬ಮತ್ತು ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
27 “ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು, ‘ಇವನಿಗಾದ ದರ್ಶನವು ಬಹುದೂರ ಕಾಲಕ್ಕೆ ಸಂಬಂಧಿಸಿದ್ದು, ದೂರ ಕಾಲವನ್ನು ಕುರಿತು ಪ್ರವಾದಿಸುತ್ತಾನೆ,’ ಎಂದು ಹೇಳುತ್ತಾರೆ.”
೨೭“ನರಪುತ್ರನೇ, ಇಗೋ, ಇಸ್ರಾಯೇಲ್ ವಂಶದವರು, ‘ಇವನಿಗಾದ ದಿವ್ಯದರ್ಶನವು ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ’ ಎಂದು ಹೇಳುತ್ತಾರೆ.
28 “ಆದ್ದರಿಂದ ಅವರಿಗೆ ಹೀಗೆ ಹೇಳು: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ, ನನ್ನ ಯಾವುದೇ ಮಾತು ಇನ್ನು ತಡವಾಗದು. ನಾನು ಹೇಳಿದ್ದೆಲ್ಲವನ್ನು ನೆರವೇರುವುದೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’”
೨೮“ಆದಕಾರಣ ನೀನು ಅವರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವುದೂ ನೆರವೇರದೆ ಇರದು; ನಾನಾಡುವ ಮಾತು ನೆರವೇರುವುದು ಖಂಡಿತ’ ಇದು ಕರ್ತನಾದ ಯೆಹೋವನ ನುಡಿ.”

< ಯೆಹೆಜ್ಕೇಲನು 12 >