< ಯೆಹೆಜ್ಕೇಲನು 11 >

1 ಆಮೇಲೆ ದೇವರಾತ್ಮರು ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವ ದೇವರ ಆಲಯದ ಪೂರ್ವದಿಕ್ಕಿನ ಬಾಗಿಲಿಗೆ, ನನ್ನನ್ನು ಎತ್ತಿಕೊಂಡು ಹೋದರು. ಪ್ರವೇಶದ್ವಾರದಲ್ಲಿ ಇಪ್ಪತ್ತೈದು ಮಂದಿ ಮನುಷ್ಯರು ಇದ್ದರು. ಅವರೊಳಗೆ ನಾನು ಜನರ ಪ್ರಧಾನರಾದ ಅಜ್ಜೂರನ ಮಗ ಯಾಜನ್ಯನನ್ನೂ, ಬೆನಾಯನ ಮಗ ಪೆಲಟೀಯನನ್ನೂ ನೋಡಿದೆನು. 2 ಆಮೇಲೆ ಯೆಹೋವ ದೇವರು ನನಗೆ, “ಮನುಷ್ಯಪುತ್ರನೇ, ಈ ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ, ದುರಾಲೋಚನೆಗಳನ್ನು ಹೇಳಿಕೊಡುವವರು ಈ ಜನರೇ. 3 ಅವರು, ‘ಇತ್ತೀಚಿಗೆ ನಮ್ಮ ಮನೆಗಳು ನಿರ್ಮಾಣವಾಗಿಲ್ಲವೇ? ಈ ಪಟ್ಟಣವು ಪಾತ್ರೆ, ಮತ್ತು ನಾವು ಅದರಲ್ಲಿರುವ ಮಾಂಸ,’ ಎನ್ನುತ್ತಾರೆ. 4 ಆದ್ದರಿಂದ ಮನುಷ್ಯಪುತ್ರನೇ, ಅವರಿಗೆ ವಿರೋಧವಾಗಿ ಪ್ರವಾದಿಸು.” 5 ಯೆಹೋವ ದೇವರ ಆತ್ಮವು ನನ್ನ ಮೇಲೆ ಬಂದು ತಿಳಿಸಲು ಹೇಳಿದ್ದೇನೆಂದರೆ: “ಇಸ್ರಾಯೇಲಿನ ಮನೆತನದವರೇ, ನೀವು ಹೀಗೆ ಹೇಳಿದ್ದೀರಿ. ಏಕೆಂದರೆ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಎಲ್ಲವುಗಳನ್ನು ನಾನು ಬಲ್ಲೆನು. 6 ನೀವು ಈ ಪಟ್ಟಣದಲ್ಲಿ ನರಹತ್ಯೆಯನ್ನು ಹೆಚ್ಚೆಚ್ಚಾಗಿ ಮಾಡಿ, ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ. 7 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ಕೊಂದು ಹಾಕಿದವರ ದೇಹಗಳೇ ಮಾಂಸ, ಈ ಪಟ್ಟಣವು ಬೇಯಿಸುವ ಪಾತ್ರೆ. ಆದರೆ ನಾನು ನಿಮ್ಮನ್ನು ಅದರಿಂದ ಹೊರಗೆ ತರುತ್ತೇನೆ. 8 ನೀವು ಖಡ್ಗಕ್ಕೆ ಭಯಪಟ್ಟಿರಿ. ನಾನು ನಿಮ್ಮ ಮೇಲೆ ಒಂದು ಖಡ್ಗವನ್ನು ತರುತ್ತೇನೆ. ಇದು ಸಾರ್ವಭೌಮ ಯೆಹೋವ ದೇವರ ನುಡಿ. 9 ನಾನು ನಿಮ್ಮನ್ನು ಪಟ್ಟಣದ ಮಧ್ಯದಿಂದ ಹೊರಗೆ ತಂದು ಪರಕೀಯರ ಕೈಗಳಿಗೆ ಒಪ್ಪಿಸುವೆನು ಮತ್ತು ನ್ಯಾಯತೀರ್ಪುಗಳನ್ನು ನಡೆಸುವೆನು. 10 ನೀವು ಖಡ್ಗದಿಂದ ನಾಶವಾಗುವಿರಿ. ನಾನು ಇಸ್ರಾಯೇಲಿನ ಮೇರೆಯಲ್ಲಿ ನ್ಯಾಯತೀರಿಸುವೆನು. ಆಗ ನಾನೇ ಯೆಹೋವ ದೇವರೆಂದು ನಿಮಗೆ ತಿಳಿಯುವುದು. 11 ಈ ಪಟ್ಟಣವು ಪಾತ್ರೆಯಾಗುವುದಿಲ್ಲ. ನೀವು ಅದರಲ್ಲಿ ಮಾಂಸವೂ ಆಗುವುದಿಲ್ಲ. ಇಸ್ರಾಯೇಲಿನ ಮೇರೆಯಲ್ಲಿ ನಾನು ನ್ಯಾಯತೀರಿಸುವೆನು. 12 ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ. ಏಕೆಂದರೆ ನೀವು ನನ್ನ ನಿಯಮಗಳಂತೆ ನಡೆಯಲಿಲ್ಲ. ನನ್ನ ನ್ಯಾಯವಿಧಿಗಳನ್ನು ಪಾಲಿಸಲಿಲ್ಲ. ಆದರೆ ನಿಮ್ಮ ಸುತ್ತಲಿರುವ ಇತರ ಜನಾಂಗಗಳ ಆಚಾರಗಳ ಪ್ರಕಾರ ಮಾಡಿದ್ದೀರಿ.” 13 ನಾನು ಪ್ರವಾದಿಸುತ್ತಿರುವಾಗ, ಬೆನಾಯನ ಮಗನಾದ ಪೆಲಟೀಯನು ಸತ್ತನು. ಆಗ ನಾನು ಮುಖ ಕೆಳಗಾಗಿ ಬಿದ್ದು, ಗಟ್ಟಿಯಾಗಿ ಕೂಗಿ, “ಸಾರ್ವಭೌಮ ಯೆಹೋವ ದೇವರೇ, ನೀವು ಇಸ್ರಾಯೇಲಿನಲ್ಲಿ ಉಳಿದವರನ್ನು ಪೂರ್ಣವಾಗಿ ಮುಗಿಸಿಬಿಡುತ್ತೀರೋ?” ಎಂದು ಹೇಳಿದನು. 14 ಯೆಹೋವ ದೇವರ ವಾಕ್ಯವು ನನಗೆ ಬಂದಿತು: 15 “ಮನುಷ್ಯಪುತ್ರನೇ, ನಿನ್ನ ಸಹೋದರರಿಗೆ, ನಿನ್ನ ಅಣ್ಣಂದಿರಿಗೆ, ನಿನ್ನ ನೆಂಟರಿಷ್ಟರಿಗೆ, ಅಂತು ಇಸ್ರಾಯೇಲ್ ವಂಶದ ಎಲ್ಲರಿಗೆ, ಯೆರೂಸಲೇಮಿನಲ್ಲೇ ಉಳಿದಿರುವವರು, ‘ಯೆಹೋವ ದೇವರ ಬಳಿಯಿಂದ ದೂರವಾಗಿ ತೊಲಗಿರಿ, ಈ ನಾಡು ನಮಗೇ ಸೊತ್ತಾಗಿ ಸಿಕ್ಕಿದೆ,’ ಎಂದು ಹೇಳಿ ಹೀನೈಸುತ್ತಿದ್ದಾರಲ್ಲವೇ? 16 “ಆದ್ದರಿಂದ ನಾನು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಅವರನ್ನು ಇತರ ಜನಾಂಗಗಳಿಂದ ದೂರ ಹಾಕಿದರೂ, ದೇಶಗಳಲ್ಲಿ ಚದರಿಸಿದರೂ, ಅವರು ಹೋಗುವ ದೇಶಗಳಲ್ಲಿ ನಾನು ಸ್ವಲ್ಪ ಕಾಲದವರೆಗೆ ಪರಿಶುದ್ಧ ಸ್ಥಳವಾಗಿರುವೆನು.’ 17 “ಆದ್ದರಿಂದ ನೀನು ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಶ್ಚಯವಾಗಿ ನಿಮ್ಮನ್ನು ಜನಾಂಗಗಳೊಳಗಿಂದ, ನೀವು ಚದರಿಹೋದ ದೇಶಗಳೊಳಗಿಂದ ಕೂಡಿಸುತ್ತೇನೆ. ಇಸ್ರಾಯೇಲ್ ದೇಶವನ್ನು ನಿಮಗೆ ತಿರುಗಿ ಕೊಡುವೆನು.’ 18 “ಅವರು ಅಲ್ಲಿಗೆ ಹಿಂತಿರುಗಿ ಮತ್ತು ಅದರಲ್ಲಿರುವ ಎಲ್ಲಾ ಅನುಪಯುಕ್ತ ಆಕೃತಿಗಳನ್ನು ಮತ್ತು ಅಸಹ್ಯಕರ ವಿಗ್ರಹಗಳನ್ನು ತೆಗೆದುಹಾಕುತ್ತಾರೆ. 19 ಅವರಿಗೆ ಒಂದೇ ಮನಸ್ಸನ್ನು ಕೊಡುವೆನು. ನಿಮ್ಮಲ್ಲಿ ಒಂದು ಹೊಸ ಆತ್ಮವನ್ನು ಇಡುವೆನು. ಅವರೊಳಗಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆಯುವೆನು. ಅವರಿಗೆ ಮೃದು ಹೃದಯವನ್ನು ಕೊಡುವೆನು. 20 ಆಗ ಅವರು ನನ್ನ ನಿಯಮಗಳನ್ನು ಕೈಗೊಂಡು ಜಾಗರೂಕತೆಯಿಂದ ಪಾಲಿಸುವರು. ನನ್ನ ನಿಯಮಗಳನ್ನು ಕೈಗೊಳ್ಳುವರು. ಅವರು ನನ್ನ ಜನರಾಗುವರು, ನಾನು ಅವರ ದೇವರಾಗುವೆನು. 21 ಆದರೆ ಯಾರ ಹೃದಯವು ಅನುಪಯುಕ್ತ ಆಕೃತಿಗಳನ್ನು ಮತ್ತು ಅಸಹ್ಯಕರ ವಿಗ್ರಹಗಳನ್ನು ಅನುಸರಿಸುತ್ತದೋ, ನಾನು ಅವರ ದುರ್ಮಾರ್ಗವನ್ನು ಅವರ ತಲೆಗೇ ಕಟ್ಟುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.” 22 ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು. ಇಸ್ರಾಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲೆಸಿತ್ತು. 23 ಯೆಹೋವ ದೇವರ ಮಹಿಮೆಯು ಪಟ್ಟಣದ ಮಧ್ಯದೊಳಗಿಂದ ಮೇಲಕ್ಕೇರಿ, ಪಟ್ಟಣದ ಪೂರ್ವದಿಕ್ಕಿನಲ್ಲಿರುವ ಪರ್ವತದ ಮೇಲೆ ನಿಂತಿತು. 24 ಅನಂತರ ದೇವರಾತ್ಮರು, ದೇವರ ಆತ್ಮರಿಂದಾದ ದರ್ಶನದಲ್ಲಿ ನನ್ನನ್ನು ಬಾಬಿಲೋನಿಯರ ದೇಶಕ್ಕೆ ಸೆರೆಯವರ ಬಳಿಗೆ ಎತ್ತಿಕೊಂಡು ಹೋದರು. ಆಗ ನಾನು ನೋಡಿದ ದರ್ಶನವು ನನ್ನಿಂದ ಮೇಲೆ ಹೋಯಿತು. 25 ಆಮೇಲೆ ಯೆಹೋವ ದೇವರು ನನಗೆ ತೋರಿಸಿದ ಎಲ್ಲಾ ಸಂಗತಿಗಳನ್ನು ಸೆರೆಯಲ್ಲಿರುವವರಿಗೆ ಹೇಳಿದೆನು.

< ಯೆಹೆಜ್ಕೇಲನು 11 >