< ವಿಮೋಚನಕಾಂಡ 12 >

1 ಯೆಹೋವ ದೇವರು ಈಜಿಪ್ಟಿನಲ್ಲಿ ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
ಐಗುಪ್ತ ದೇಶದಲ್ಲಿ ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
2 “ಎಲ್ಲಾ ಮಾಸಗಳಲ್ಲಿ ಇದೇ ನಿಮಗೆ ಆದಿಮಾಸವಾಗಿರಬೇಕು. ಇದು ನಿಮಗೆ ವರುಷದ ಮೊದಲನೆಯ ತಿಂಗಳಾಗಿರಬೇಕು.
“ಎಲ್ಲಾ ತಿಂಗಳುಗಳಲ್ಲಿ ಇದೇ ನಿಮಗೆ ಮೊದಲ ತಿಂಗಳಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರುವುದು.
3 ಇಸ್ರಾಯೇಲ್ ಸಭೆಗೆಲ್ಲಾ ನೀವು ಹೇಳಬೇಕಾದದ್ದೇನೆಂದರೆ, ಈ ತಿಂಗಳಿನ ಹತ್ತನೆಯ ದಿನದಲ್ಲಿ ಅವರು ತಮಗೆ ಪ್ರತಿ ಗೋತ್ರಗಳ ಪ್ರತಿಯೊಂದು ಕುಟುಂಬಕ್ಕೆ ಒಂದರಂತೆ ಕುರಿಮರಿಯನ್ನು ತೆಗೆದುಕೊಳ್ಳಬೇಕು.
ಇದರ ವಿಷಯದಲ್ಲಿ ನೀವು ಇಸ್ರಾಯೇಲರ ಸಮೂಹಕ್ಕೆಲ್ಲಾ ಹೀಗೆ ಅಪ್ಪಣೆಮಾಡಬೇಕು, ‘ಈ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ತೆಗೆದುಕೊಳ್ಳಬೇಕು.
4 ಆ ಕುರಿಮರಿಯನ್ನು ಪೂರ್ತಿಯಾಗಿ ತಿನ್ನುವುದಕ್ಕೆ ಕುಟುಂಬವು ಚಿಕ್ಕದಾಗಿದ್ದರೆ, ತನ್ನ ಮನೆಗೆ ಸಮೀಪವಾಗಿರುವ ತನ್ನ ನೆರೆಯವನ ಕುಟುಂಬದಲ್ಲಿ ಲೆಕ್ಕನೋಡಿ ಅವರೊಂದಿಗೆ ಪಾಲು ಹೊಂದಲಿ. ಒಬ್ಬೊಬ್ಬನು ತಿನ್ನುವ ಅಳತೆಯ ಪ್ರಕಾರ ಕುರಿಮರಿಯನ್ನು ತೆಗೆದುಕೊಳ್ಳಲಿ.
ಕುಟುಂಬವು ಚಿಕ್ಕದಾಗಿದ್ದರೆ, ಒಂದು ಕುರಿಮರಿಯನ್ನು ಪೂರ್ಣವಾಗಿ ತಿನ್ನುವುದಕ್ಕೆ ಆಗದೆ ಹೋದ ಪಕ್ಷಕ್ಕೆ ನೆರೆಮನೆಯ ಕುಟುಂಬದವರೊಂದಿಗೆ ಸೇರಿ, ಒಬ್ಬೊಬ್ಬನು ಎಷ್ಟೆಷ್ಟು ತಿನ್ನುವನೆಂದು ಗೊತ್ತುಮಾಡಿಕೊಂಡು ಜನಗಳ ಸಂಖ್ಯಾನುಸಾರ ಮರಿಗಳನ್ನು ತೆಗೆದುಕೊಳ್ಳಲಿ.
5 ನೀವು ಆಯ್ದುಕೊಳ್ಳುವ ಕುರಿಮರಿಯು ದೋಷರಹಿತವಾಗಿರುವ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ, ಆಡುಗಳಿಂದಾಗಲಿ ತೆಗೆದುಕೊಳ್ಳಬಹುದು.
ಆ ಮರಿಯು ಊನವಿಲ್ಲದ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಅಥವಾ ಆಡುಗಳಿಂದಾಗಲಿ ಅದನ್ನು ತೆಗೆದುಕೊಳ್ಳಬಹುದು.
6 ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಳ್ಳಬೇಕು. ತರುವಾಯ ಸಂಜೆಯಲ್ಲಿ ಇಸ್ರಾಯೇಲಿನ ಜನಾಂಗದವರೆಲ್ಲರೂ ಅವುಗಳನ್ನು ವಧಿಸಬೇಕು.
ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು, ಆ ದಿನದ ಸಂಜೆ ವೇಳೆಯಲ್ಲಿ ಇಸ್ರಾಯೇಲರ ಸಮೂಹದವರೆಲ್ಲರೂ ಒಟ್ಟಿಗೆ ಸೇರಿ ಅವುಗಳನ್ನು ವಧಿಸಬೇಕು.
7 ಅವರು ರಕ್ತದಲ್ಲಿ ಸ್ವಲ್ಪ ತೆಗೆದು, ಕುರಿಮರಿಯ ಮಾಂಸವನ್ನು ಭೋಜನಮಾಡುವ ಮನೆಗಳ ಬಾಗಿಲಿನ ನಿಲುವು ಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು.
ಅವರು ಅವುಗಳ ರಕ್ತದಲ್ಲಿ ಸ್ವಲ್ಪವನ್ನು ತೆಗೆದು ತಾವು ಆ ಭೋಜನವನ್ನು ಮಾಡುವ ಮನೆಬಾಗಿಲಿನ ಎರಡು ನಿಲುವುಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು.
8 ಆ ರಾತ್ರಿಯಲ್ಲಿಯೇ ಮಾಂಸವನ್ನು ಸುಟ್ಟು, ಅದನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ಕಹಿಯಾದ ಪಲ್ಯಗಳ ಸಂಗಡ ತಿನ್ನಬೇಕು.
ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ಭೋಜನಮಾಡಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಸೊಪ್ಪಿನ ಪಲ್ಯಗಳ ಸಂಗಡ ಊಟಮಾಡಬೇಕು.
9 ಅದರಲ್ಲಿ ಯಾವುದನ್ನೂ ಹಸಿಯಾದದ್ದನ್ನಾಗಲಿ, ನೀರಿನಲ್ಲಿ ಬೇಯಿಸಿಯಾಗಲಿ ತಿನ್ನದೆ, ಅದರ ತಲೆ, ತೊಡೆ, ಒಳಗಿನವುಗಳ ಸಹಿತವಾಗಿ ಬೆಂಕಿಯಲ್ಲಿ ಸುಟ್ಟೇ ಅದನ್ನು ತಿನ್ನಬೇಕು.
ಅದನ್ನು ಹಸಿಯಾಗಿಯೂ ನೀರಿನಲ್ಲಿ ಬೇಯಿಸಿಯೂ ತಿನ್ನಕೂಡದು. ಅದರ ತಲೆ, ತೊಡೆ, ಹೊಟ್ಟೆ, ಇವುಗಳ ಸಹಿತವಾಗಿ ಬೆಂಕಿಯಲ್ಲೇ ಸುಟ್ಟು ತಿನ್ನಬೇಕು.
10 ಅದರಲ್ಲಿ ಬೆಳಗಿನವರೆಗೆ ಏನನ್ನೂ ಉಳಿಸಬಾರದು. ಬೆಳಗಿನವರೆಗೆ ಅದರಲ್ಲಿ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
೧೦ಮರುದಿನದ ಬೆಳಗಿನವರೆಗೆ ಅದರಲ್ಲಿ ಸ್ವಲ್ಪವನ್ನಾದರೂ ಉಳಿಸಕೂಡದು, ಬೆಳಗಿನವರೆಗೆ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
11 ನೀವು ಅದನ್ನು ತಿನ್ನತಕ್ಕ ರೀತಿ ಇದೇ: ನೀವು ನಿಮ್ಮ ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು ತ್ವರೆಯಾಗಿ ಅದನ್ನು ತಿನ್ನಬೇಕು, ಅದು ಯೆಹೋವ ದೇವರ ಪಸ್ಕವಾಗಿದೆ.
೧೧ಆ ಭೋಜನವನ್ನು ಮಾಡಬೇಕಾದ ಕ್ರಮ ಹೇಗೆಂದರೆ: ನೀವು ನಡುವನ್ನು ಕಟ್ಟಿಕೊಂಡು, ಕೆರವನ್ನು ಮೆಟ್ಟಿಕೊಂಡು, ಕೋಲುಹಿಡಿದು, ತ್ವರೆಯಾಗಿ ಮಾಡಬೇಕು. ಇದು ಯೆಹೋವನಿಗೆ ಆಚರಿಸತಕ್ಕ ಪಸ್ಕಹಬ್ಬವು.
12 “ಏಕೆಂದರೆ ನಾನು ಈ ರಾತ್ರಿ ಈಜಿಪ್ಟ್ ದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ, ಪಶುಗಳಲ್ಲಿಯೂ ಇರುವ ಚೊಚ್ಚಲಾದವುಗಳನ್ನು ಸಂಹರಿಸುವೆನು. ಈಜಿಪ್ಟಿನ ದೇವರುಗಳಿಗೆಲ್ಲಾ ನಾನು ನ್ಯಾಯತೀರಿಸುವೆನು. ನಾನೇ ಯೆಹೋವ ದೇವರು.
೧೨ಆ ರಾತ್ರಿ ನಾನು ಐಗುಪ್ತದೇಶದ ಮೇಲೆ ಹಾದುಹೋಗಿ ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ, ಚೊಚ್ಚಲಾಗಿರುವುದನ್ನೆಲ್ಲಾ ಸಂಹರಿಸುವೆನು. ಐಗುಪ್ತ ದೇಶದ ಸಮಸ್ತ ದೇವತೆಗಳಿಗೂ ನ್ಯಾಯತೀರಿಸುವೆನು. ನಾನೇ ಯೆಹೋವನು.
13 ಆದರೆ ನೀವು ಇರುವ ಎಲ್ಲಾ ಮನೆಗಳ ಮೇಲೆ ರಕ್ತವು ನಿಮಗೆ ಗುರುತಾಗಿರುವುದು. ಆ ರಕ್ತವನ್ನು ನಾನು ನೋಡುವಾಗ, ನಿಮ್ಮನ್ನು ದಾಟಿಹೋಗುವೆನು. ಈಜಿಪ್ಟ್ ದೇಶವನ್ನು ನಾನು ಸಂಹರಿಸುವ ಸಮಯದಲ್ಲಿ, ನಿಮ್ಮನ್ನು ನಾಶಮಾಡುವ ಯಾವ ಉಪದ್ರವವು ನಿಮ್ಮ ಮೇಲೆ ಬರುವುದಿಲ್ಲ.
೧೩ಆದರೆ ನೀವು ಇರುವ ಎಲ್ಲಾ ಮನೆಗಳ ಬಾಗಿಲಿಗೆ ಹಚ್ಚಿರುವ ರಕ್ತವು ನಿಮಗೆ ಗುರುತಾಗಿರುವುದು. ಆ ರಕ್ತವನ್ನು ನಾನು ನೋಡುವಾಗ ನಿಮಗೆ ಯಾವ ನಷ್ಟವನ್ನೂ ಮಾಡದೇ ಮುಂದಕ್ಕೆ ದಾಟಿಹೋಗುವೆನು. ನಾನು ಐಗುಪ್ತ್ಯದವರನ್ನು ಸಂಹರಿಸುವಾಗ ನಿಮಗೆ ಯಾವ ಹಾನಿಯೂ ಉಂಟಾಗುವುದಿಲ್ಲ.
14 “ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ನೀವು ಅದನ್ನು ಯೆಹೋವ ದೇವರಿಗೆ ಹಬ್ಬವಾಗಿ ತಲತಲಾಂತರಗಳಲ್ಲಿ ಆಚರಿಸಬೇಕು. ಅದನ್ನು ಶಾಶ್ವತ ನಿಯಮವೆಂದು ಎಂದೆಂದಿಗೂ ಆಚರಿಸಬೇಕು.
೧೪ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ಯೆಹೋವನ ಘನಕ್ಕಾಗಿ ಆ ಹಬ್ಬವನ್ನು ತಲತಲಾಂತರಕ್ಕೂ ಆಚರಿಸಬೇಕು. ಅದನ್ನು ಶಾಶ್ವತನಿಯಮವೆಂದು ಎಂದೆಂದಿಗೂ ಆಚರಿಸಬೇಕು.
15 ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು. ಏಕೆಂದರೆ ಮೊದಲನೆಯ ದಿನದಿಂದ ಏಳನೆಯ ದಿನದವರೆಗೆ ಹುಳಿರೊಟ್ಟಿ ತಿನ್ನುವವರನ್ನು ಇಸ್ರಾಯೇಲಿನೊಳಗಿಂದ ಬಹಿಷ್ಕರಿಸಬೇಕು.
೧೫“‘ಏಳು ದಿನಗಳವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಬಿಡಬೇಕು. ಏಕೆಂದರೆ ಮೊದಲನೆಯ ದಿನದಿಂದ ಏಳನೆಯ ದಿನದವರೆಗೆ ಹುಳಿರೊಟ್ಟಿಯನ್ನು ತಿನ್ನುವವನು ಇಸ್ರಾಯೇಲಿನೊಳಗಿಂದ ತೆಗೆದುಹಾಕಲ್ಪಡಬೇಕು.
16 ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು, ಏಳನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಸೇರಬೇಕು. ಊಟಕ್ಕೆ ಬೇಕಾದದ್ದನ್ನು ಮಾಡುವುದನ್ನು ಬಿಟ್ಟು, ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡಬಾರದು.
೧೬ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಏಳನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆ ಸೇರಬೇಕು. ಈ ಎರಡು ದಿನಗಳಲ್ಲಿ ಯಾವ ಕೆಲಸವನ್ನು ಮಾಡಕೂಡದು. ಊಟಕ್ಕೆ ಬೇಕಾದದ್ದನ್ನು ಮಾತ್ರ ಮಾಡಬಹುದೇ ಹೊರತು ಬೇರೆ ಯಾವ ಕೆಲಸವನ್ನು ಮಾಡಬಾರದು.
17 “ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಬೇಕು. ಏಕೆಂದರೆ ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ್ದೇನೆ. ಆದಕಾರಣ ನಿಮ್ಮ ಸಂತತಿಗಳಲ್ಲಿ ಅದನ್ನು ಶಾಶ್ವತ ನಿಯಮವೆಂದು ಎಂದೆಂದಿಗೂ ಆಚರಿಸಬೇಕು.
೧೭ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಬೇಕು. ಏಕೆಂದರೆ ಈ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದ್ದರಿಂದ ನೀವೂ, ನಿಮ್ಮ ಸಂತತಿಯವರೂ ಈ ದಿನವನ್ನು ಆಚರಣೆಗೆ ತರಬೇಕು. ಇದು ಶಾಶ್ವತವಾದ ನಿಯಮವಾಗಿದೆ.
18 ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯಿಂದ ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನ ಸಂಜೆಯವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು.
೧೮ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಮೊದಲುಗೊಂಡು ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು.
19 ಏಳು ದಿನಗಳವರೆಗೆ ಹುಳಿ ಹಿಟ್ಟು ನಿಮ್ಮ ಮನೆಗಳಲ್ಲಿ ಸಿಕ್ಕಬಾರದು, ಏಕೆಂದರೆ ಹುಳಿ ಬೆರೆಸಿದ್ದನ್ನು ಯಾರು ತಿನ್ನುವರೋ ಅವರು ಪರದೇಶದವರಾಗಲಿ, ಸ್ವದೇಶದವರಾಗಲಿ ಅವರನ್ನು ಇಸ್ರಾಯೇಲ್ ಸಭೆಯೊಳಗಿಂದ ಬಹಿಷ್ಕರಿಸಬೇಕು.
೧೯ಆ ಏಳು ದಿನಗಳವರೆಗೆ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟು ಇರಬಾರದು. ಹುಳಿ ಬೆರಸಿದ್ದನ್ನು ಯಾರು ತಿನ್ನುವರೋ ಅವನು ಪರದೇಶದವನಾಗಲಿ, ಸ್ವದೇಶದವನಾಗಲಿ ಇಸ್ರಾಯೇಲ ಸಮೂಹದೊಳಗಿಂದ ತೆಗೆದುಹಾಕಲ್ಪಡಬೇಕು.
20 ಹುಳಿ ಕಲಸಿದ್ದು ಯಾವುದೇ ಆಗಿರಲಿ ನೀವು ತಿನ್ನಬಾರದು. ನಿಮ್ಮ ಎಲ್ಲಾ ನಿವಾಸಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು,” ಎಂದು ಹೇಳಿದರು.
೨೦ನೀವು ನಿಮ್ಮ ಮನೆಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕೇ ಹೊರತು, ಹುಳಿಕಲಸಿದ ಯಾವುದನ್ನೂ ತಿನ್ನಕೂಡದು’” ಎಂದು ಆಜ್ಞಾಪಿಸಿದನು.
21 ಆಗ ಮೋಶೆಯು ಇಸ್ರಾಯೇಲಿನ ಎಲ್ಲಾ ಹಿರಿಯರನ್ನು ಕರೆದು ಅವರಿಗೆ, “ನಿಮ್ಮ ಕುಟುಂಬಗಳ ಪ್ರಕಾರ ಕುರಿಗಳನ್ನು ಆಯ್ದುಕೊಂಡು ಪಸ್ಕಹಬ್ಬಕ್ಕಾಗಿ ಕೊಯ್ಯಿರಿ.
೨೧ಆಗ ಮೋಶೆಯು ಇಸ್ರಾಯೇಲರ ಹಿರಿಯರೆಲ್ಲರನ್ನೂ ಕರೆಯಿಸಿ ಅವರಿಗೆ, “ನೀವು, ನಿಮ್ಮ ನಿಮ್ಮ ಕುಟುಂಬಗಳಿಗೋಸ್ಕರ ಮಂದೆಯಿಂದ ಮರಿಗಳನ್ನು ಆರಿಸಿಕೊಂಡು ಪಸ್ಕಹಬ್ಬಕ್ಕೆ ಕೊಯ್ಯಿರಿ.
22 ಹಿಸ್ಸೋಪ ಗಿಡದ ಕಟ್ಟನ್ನು ತೆಗೆದುಕೊಂಡು, ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ, ಬಾಗಿಲಿನ ಮೇಲೆ ಅಡ್ಡ ಪಟ್ಟಿಗೂ, ಅದರ ಪಕ್ಕದಲ್ಲಿರುವ ಎರಡು ನಿಲುವು ಕಂಬಗಳಿಗೂ ಹಚ್ಚಿರಿ. ನಿಮ್ಮಲ್ಲಿ ಯಾರೂ ಬೆಳಗಾಗುವವರೆಗೆ ಮನೆಯ ಬಾಗಿಲನ್ನು ಬಿಟ್ಟುಹೋಗಬಾರದು.
೨೨ಹಿಸ್ಸೋಪ್ ಗಿಡದ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿಲಿನ ಮೇಲಿನ ಅಡ್ಡಪಟ್ಟಿಗೂ, ಅದರ ಪಕ್ಕದಲ್ಲಿರುವ ಎರಡು ನಿಲುವುಪಟ್ಟಿಗಳಿಗೂ ಹಚ್ಚಬೇಕು. ತರುವಾಯ ನಿಮ್ಮಲ್ಲಿ ಒಬ್ಬರೂ ಬೆಳಗಾಗುವವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೊರಗೆ ಹೋಗಬಾರದು.
23 ಏಕೆಂದರೆ ಯೆಹೋವ ದೇವರು ಈಜಿಪ್ಟಿನವರನ್ನು ಸಂಹರಿಸುವುದಕ್ಕಾಗಿ ಹಾದುಹೋಗುವರು. ಅವರು ಅಡ್ಡ ಪಟ್ಟಿಯ ಮೇಲೂ, ಅದರ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ, ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡದಂತೆ, ಯೆಹೋವ ದೇವರು ನಿಮ್ಮ ಬಾಗಿಲುಗಳನ್ನು ದಾಟಿಹೋಗುವರು.
೨೩ಯೆಹೋವನು ಐಗುಪ್ತ್ಯರನ್ನು ಹತಮಾಡುವುದಕ್ಕೆ ದೇಶದ ನಡುವೆ ಹಾದುಹೋಗುವನು. ಆಗ ನಿಮ್ಮ ನಿಮ್ಮ ಮನೆಬಾಗಿಲಿನ ಮೇಲಣ ಪಟ್ಟಿಯಲ್ಲಿಯೂ, ಎರಡು ನಿಲುವು ಪಟ್ಟಿಗಳಲ್ಲಿಯೂ ಆ ರಕ್ತವನ್ನು ಕಂಡು ಮುಂದಕ್ಕೆ ದಾಟಿ ಹೋಗುವನು. ನಿಮ್ಮ ಪ್ರಾಣ ತೆಗೆಯುವುದಕ್ಕೆ ಸಂಹಾರಕನು ನಿಮ್ಮ ಮನೆಗಳಲ್ಲಿ ಬರುವುದೇ ಇಲ್ಲ.
24 “ಇದನ್ನು ಒಂದು ಶಾಸನವಾಗಿ ನೀವೂ, ನಿಮ್ಮ ಪುತ್ರರೂ ಸದಾಕಾಲಕ್ಕೂ ಆಚರಿಸತಕ್ಕದ್ದು.
೨೪ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವೆಂದು ಆಚರಿಸಬೇಕು.
25 ಯೆಹೋವ ದೇವರು ಕೊಡುವೆನೆಂದು ಪ್ರಮಾಣ ಮಾಡಿದ ದೇಶಕ್ಕೆ ನೀವು ಬಂದಾಗ, ಈ ಆಚರಣೆಯನ್ನು ನೀವು ಕೈಗೊಳ್ಳಬೇಕು.
೨೫ಯೆಹೋವನು ತನ್ನ ಮಾತಿನ ಮೇರೆಗೆ ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ, ಈ ಆಚರಣೆಯನ್ನು ಕೈಕೊಳ್ಳಬೇಕು.
26 ನಿಮ್ಮ ಮಕ್ಕಳು, ‘ಈ ಆಚರಣೆಯ ಅರ್ಥವೇನು?’ ಎಂದು ಕೇಳಿದಾಗ,
೨೬ಮುಂದೆ ನಿಮ್ಮ ಮಕ್ಕಳು, ‘ನೀವು ನಡೆಸುವ ಈ ಆಚರಣೆ ಏನು?’ ಎಂದು ನಿಮ್ಮನ್ನು ಕೇಳುವಾಗ,
27 ನೀವು ಅವರಿಗೆ, ‘ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಈಜಿಪ್ಟಿನವರನ್ನು ಸಂಹರಿಸಿ, ನಮ್ಮ ಮನೆಗಳನ್ನು ಕಾಪಾಡುವುದಕ್ಕಾಗಿ ಇಸ್ರಾಯೇಲರ ಮನೆಗಳನ್ನು ದಾಟಿಹೋದ ಯೆಹೋವ ದೇವರ ಪಸ್ಕ ಬಲಿಯ ಆಚರಣೆಯನ್ನು ನಡೆಸುತ್ತಿದ್ದೇವೆ,’ ಎಂದು ನೀವು ಹೇಳಬೇಕು,” ಎಂದನು. ಆಗ ಜನರು ತಲೆಬಾಗಿಸಿ ಆರಾಧಿಸಿದರು.
೨೭ನೀವು ಅವರಿಗೆ, ‘ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತ ದೇಶದಲ್ಲಿದ್ದ ಇಸ್ರಾಯೇಲರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮ ಮನೆಯವರನ್ನು ಉಳಿಸಿದ್ದರಿಂದ ನಾವು ಯೆಹೋವನ ಪಸ್ಕವೆಂಬ ಈ ಆಚರಣೆಯನ್ನು ನಡೆಸಲೇಬೇಕು ಎಂದು ಹೇಳಬೇಕು’” ಎಂದನು. ಆಗ ಜನರು ತಲೆಬಾಗಿ ಯೆಹೋವನಿಗೆ ನಮಸ್ಕರಿಸಿದರು.
28 ಯೆಹೋವ ದೇವರು ಮೋಶೆ ಆರೋನರಿಗೆ ಆಜ್ಞಾಪಿಸಿದ ಮೇರೆಗೆ ಇಸ್ರಾಯೇಲರು ಮಾಡಿದರು.
೨೮ಇಸ್ರಾಯೇಲರು ಅಲ್ಲಿಂದ ಹೊರಟು ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದರು.
29 ಮಧ್ಯರಾತ್ರಿಯಲ್ಲಿ ಸಿಂಹಾಸನದ ಮೇಲೆ ಕೂತುಕೊಂಡ ಫರೋಹನ ಚೊಚ್ಚಲು ಮಗನು ಮೊದಲುಗೊಂಡು, ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಎಂದರೆ ಈಜಿಪ್ಟ್ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ, ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವನ್ನೂ ಯೆಹೋವ ದೇವರು ಸಂಹರಿಸಿದರು.
೨೯ಮಧ್ಯರಾತ್ರಿಯಲ್ಲಿ ಯೆಹೋವನು ಸಿಂಹಾಸನದಲ್ಲಿರುವ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಐಗುಪ್ತ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಸಂಹಾರ ಮಾಡಿದನು. ಪಶುಗಳ ಚೊಚ್ಚಲು ಮರಿಗಳನ್ನೂ ಸಂಹಾರಮಾಡಿದನು.
30 ಆಗ ಫರೋಹನೂ, ಅವನ ಎಲ್ಲಾ ಅಧಿಕಾರಿಗಳೂ, ಎಲ್ಲಾ ಈಜಿಪ್ಟಿನವರೂ ರಾತ್ರಿಯಲ್ಲಿ ಎದ್ದರು. ಆ ಈಜಿಪ್ಟಿನಲ್ಲಿ ದೊಡ್ಡ ಗೋಳಾಟವಾಯಿತು. ಏಕೆಂದರೆ ಅಲ್ಲಿ ಸತ್ತವರು ಇಲ್ಲದ ಒಂದು ಮನೆಯಾದರೂ ಇರಲಿಲ್ಲ.
೩೦ಆ ರಾತ್ರಿಯಲ್ಲಿ ಫರೋಹನೂ, ಅವನ ಪರಿವಾರದವರೂ, ಐಗುಪ್ತ್ಯರೆಲ್ಲರೂ ಎದ್ದು ನೋಡಲಾಗಿ ಸಾವಿಲ್ಲದ ಮನೆ ಒಂದೂ ಇರಲಿಲ್ಲ. ಐಗುಪ್ತ ದೇಶದಲ್ಲಿ ದೊಡ್ಡ ಗೋಳಾಟವಾಯಿತು.
31 ಫರೋಹನು ರಾತ್ರಿಯಲ್ಲಿ ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, “ನೀವು ಮತ್ತು ಇಸ್ರಾಯೇಲರೆಲ್ಲರೂ ಎದ್ದು ನನ್ನ ಜನರೊಳಗಿಂದ ಹೊರಟು ಹೋಗಿರಿ. ನೀವು ಹೇಳಿದ ಹಾಗೆಯೇ, ಯೆಹೋವ ದೇವರನ್ನು ಆರಾಧಿಸುವುದಕ್ಕೆ ಹೊರಟುಹೋಗಿರಿ.
೩೧ಫರೋಹನು ಆ ರಾತ್ರಿಯಲ್ಲೇ ಮೋಶೆ ಮತ್ತು ಆರೋನರನ್ನು ಕರೆಯಿಸಿ ಅವರಿಗೆ, “ನೀವು ಎದ್ದು ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ. ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸುವುದಕ್ಕೆ ನೀವು ಮತ್ತು ಇಸ್ರಾಯೇಲರು ಹೊರಟುಹೋಗಿರಿ.
32 ನೀವು ಹೇಳಿದಂತೆ ನಿಮ್ಮ ಕುರಿದನಗಳನ್ನು ತೆಗೆದುಕೊಳ್ಳಿರಿ. ನನ್ನನ್ನು ಸಹ ಆಶೀರ್ವದಿಸಿರಿ,” ಎಂದನು.
೩೨ನೀವು ಕೇಳಿಕೊಂಡಂತೆ ನಿಮ್ಮ ಕುರಿದನಗಳ ಹಿಂಡುಗಳನ್ನು ತೆಗೆದುಕೊಂಡು ಹೋಗಿರಿ. ಅದಲ್ಲದೆ ನನ್ನನ್ನೂ ಸಹ ಆಶೀರ್ವದಿಸಿರಿ” ಎಂದನು.
33 ಇದಲ್ಲದೆ ಈಜಿಪ್ಟಿನವರು, “ನಾವೆಲ್ಲರೂ ಸಾಯುತ್ತೇವೆ,” ಎಂದು ಹೇಳಿ, ಅವರನ್ನು ತ್ವರೆಯಾಗಿ ದೇಶದೊಳಗಿಂದ ಕಳುಹಿಸಿಬಿಡುವ ಹಾಗೆ ಜನರನ್ನು ಒತ್ತಾಯಮಾಡಿದರು.
೩೩ಐಗುಪ್ತರು, “ನಾವೆಲ್ಲರು ಸಾಯುತ್ತೇವೆ” ಎಂದುಕೊಂಡು ಇಸ್ರಾಯೇಲರನ್ನು ತಮ್ಮ ದೇಶದಿಂದ ಬೇಗನೇ ಕಳುಹಿಸಿಬಿಡುವುದಕ್ಕೆ ಅಪೇಕ್ಷೆಪಟ್ಟು ಅವರನ್ನು ಬಲವಂತಮಾಡಿದರು.
34 ಆದ್ದರಿಂದ ಜನರು ಹಿಟ್ಟಿಗೆ ಹುಳಿ ಹಾಕುವುದಕ್ಕಿಂತ ಮುಂಚೆ, ಅಡಿಗೆ ಮಾಡುವ ಪಾತ್ರೆಗಳ ಸಂಗಡ ಬಟ್ಟೆಗಳಲ್ಲಿ ಕಟ್ಟಿ, ಹೆಗಲಿನ ಮೇಲೆ ಹೊತ್ತುಕೊಂಡು ಹೋದರು.
೩೪ಆದುದರಿಂದ ಜನರು ಹಿಟ್ಟಿಗೆ ಹುಳಿಹಾಕುವುದಕ್ಕಿಂತ ಮೊದಲೇ ನಾದುವ ಪಾತ್ರೆಗಳ ಸಂಗಡ ಕಣಕದ ಮುದ್ದೆಯನ್ನು ಬಟ್ಟೆಯಲ್ಲಿ ಗಂಟುಕಟ್ಟಿ ಹೆಗಲಿನ ಮೇಲೆ ಹಾಕಿಕೊಂಡು ಹೊರಟುಹೋದರು.
35 ಇಸ್ರಾಯೇಲರು ಮೋಶೆಯು ಹೇಳಿದಂತೆ ಮಾಡಿ, ಬೆಳ್ಳಿಬಂಗಾರದ ಒಡವೆಗಳನ್ನೂ, ಬಟ್ಟೆಗಳನ್ನೂ ಈಜಿಪ್ಟಿನವರಿಂದ ಕೇಳಿ ಪಡೆದರು.
೩೫ಇಸ್ರಾಯೇಲರು ಮೋಶೆಯ ಮಾತಿನ ಮೇರೆಗೆ ಐಗುಪ್ತ್ಯರಿಂದ ಬೆಳ್ಳಿ ಬಂಗಾರದ ಒಡವೆಗಳನ್ನು, ಬಟ್ಟೆಗಳನ್ನು ಕೇಳಿ ಪಡೆದುಕೊಂಡರು.
36 ಯೆಹೋವ ದೇವರು ಈಜಿಪ್ಟಿನವರ ಎದುರಿನಲ್ಲಿ ಜನರ ಮೇಲೆ ದಯೆ ತೋರಿಸಿದ್ದರಿಂದ, ಅವರು ಕೇಳಿದ್ದನ್ನು ಕೊಟ್ಟರು. ಹೀಗೆ ಅವರು ಈಜಿಪ್ಟಿನವರ ಸೊತ್ತನ್ನು ಸುಲಿದುಕೊಂಡರು.
೩೬ಯೆಹೋವನು ಅವರ ಮೇಲೆ ಐಗುಪ್ತ್ಯರಲ್ಲಿ ದಯೆಯನ್ನು ಹುಟ್ಟಿಸಿದ್ದರಿಂದ ಅವರು ಕೇಳಿಕೊಂಡದ್ದೆಲ್ಲವನ್ನು ಐಗುಪ್ತರು ಕೊಟ್ಟರು. ಹೀಗೆ ಇಸ್ರಾಯೇಲರು ಐಗುಪ್ತ್ಯರ ಸೊತ್ತನ್ನು ಸುಲಿದುಕೊಂಡರು.
37 ಆಗ ಇಸ್ರಾಯೇಲರಲ್ಲಿ ಮಕ್ಕಳಲ್ಲದೆ ಗಂಡಸರು ಮಾತ್ರ ಆರು ಲಕ್ಷ ಜನರು ಕಾಲುನಡಿಗೆಯಾಗಿ ರಮ್ಸೇಸನ್ನು ಬಿಟ್ಟು ಸುಕ್ಕೋತಿಗೆ ಪ್ರಯಾಣಮಾಡಿದರು.
೩೭ಇಸ್ರಾಯೇಲರು ರಾಮ್ಸೇಸ್ ಪಟ್ಟಣದಿಂದ ಹೊರಟು ಸುಕ್ಕೋತಿಗೆ ಬಂದರು. ಹೆಂಗಸರು ಮಕ್ಕಳು ಅಲ್ಲದೆ ಗಂಡಸರು ಮಾತ್ರ ಸುಮಾರು ಆರುಲಕ್ಷ ಮಂದಿ ಇದ್ದರು.
38 ಬೇರೆ ಜನಸಮೂಹವೂ ಕುರಿದನ ಮೊದಲಾದ ಪಶುಗಳ ಬಹುದೊಡ್ಡ ಹಿಂಡೂ ಇಸ್ರಾಯೇಲರ ಸಂಗಡ ಹೋದವು.
೩೮ಅವರೊಂದಿಗೆ ಬಹು ಮಂದಿ ಅನ್ಯರೂ ಹೊರಟುಬಂದಿದ್ದರು. ಕುರಿದನಗಳ ಹಿಂಡೂ ಪಶುಗಳೂ ಅವರ ಸಂಗಡ ಹೊರಟುಹೋದವು.
39 ಆಗ ಅವರು ಈಜಿಪ್ಟಿನಿಂದ ತಂದಿದ್ದ ನಾದಿದ ಹಿಟ್ಟು ಇನ್ನೂ ಹುಳಿಯಾಗದ ಕಾರಣ, ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿದರು. ಏಕೆಂದರೆ ಅವರನ್ನು ಅಲ್ಲಿ ನಿಲ್ಲಗೊಡದೆ ಈಜಿಪ್ಟಿನಿಂದ ಓಡಿಸಿಬಿಟ್ಟಿದ್ದರು. ಅವರು ತಮಗಾಗಿ ಯಾವ ಆಹಾರವನ್ನೂ ಸಿದ್ಧಪಡಿಸಿಕೊಂಡಿರಲಿಲ್ಲ.
೩೯ಅವರು ಐಗುಪ್ತ ದೇಶದಿಂದ ತಂದ ನಾದಿದ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಕೊಂಡರು. ಅವರು ಐಗುಪ್ತ ದೇಶದಿಂದ ಹೊರಡಿಸಲ್ಪಟ್ಟು ಸ್ವಲ್ಪವಾದರೂ ಸಮಯ ಸಿಕ್ಕದೆ ಹೋದದರಿಂದ ಕಣಕದಲ್ಲಿ ಹುಳಿಯನ್ನು ಕಲಸಿರಲಿಲ್ಲ ಮತ್ತು ಬೇರೆ ಯಾವ ಆಹಾರವನ್ನೂ ಸಿದ್ಧಪಡಿಸಿಕೊಂಡಿರಲಿಲ್ಲ.
40 ಇಸ್ರಾಯೇಲರು ಈಜಿಪ್ಟಿನಲ್ಲಿ ಪ್ರವಾಸವಾಗಿ ವಾಸಮಾಡಿದ್ದ ಕಾಲವು ನಾನೂರ ಮೂವತ್ತು ವರ್ಷಗಳಾಗಿದ್ದವು.
೪೦ಇಸ್ರಾಯೇಲರು ಐಗುಪ್ತ ದೇಶದಲ್ಲಿ ಸುಮಾರು ನಾನೂರಮೂವತ್ತು ವರ್ಷ ವಾಸವಾಗಿದ್ದರು.
41 ನಾನೂರ ಮೂವತ್ತು ವರ್ಷಗಳು ತೀರಿದ ತರುವಾಯ, ಅದೇ ದಿನದಲ್ಲಿ ಯೆಹೋವ ದೇವರ ಸೈನ್ಯಗಳೆಲ್ಲಾ ಈಜಿಪ್ಟ್ ದೇಶವನ್ನು ಬಿಟ್ಟು ಹೊರಗೆ ಹೋದವು.
೪೧ನಾನೂರಮೂವತ್ತು ವರ್ಷಗಳು ಕಳೆದನಂತರ ಅದೇ ದಿನದಲ್ಲಿಯೇ ಯೆಹೋವನ ಸೈನ್ಯಗಳೆಲ್ಲಾ ಐಗುಪ್ತ ದೇಶವನ್ನು ಬಿಟ್ಟು ಹೊರಟುಹೋದವು.
42 ದೇವರು ಈಜಿಪ್ಟ್ ದೇಶದಿಂದ ಅವರನ್ನು ಹೊರಗೆ ತಂದ ಕಾರಣ, ಇದು ಯೆಹೋವ ದೇವರಿಗೆ ಆಚರಿಸಬೇಕಾದ ರಾತ್ರಿಯಾಗಿತ್ತು. ಇಸ್ರಾಯೇಲರು ತಮ್ಮ ಸಂತತಿಗಳಲ್ಲಿ ಯೆಹೋವ ದೇವರಿಗೆ ಆಚರಿಸಬೇಕಾದ ರಾತ್ರಿಯು ಇದೇ.
೪೨ಯೆಹೋವನು ಆ ರಾತ್ರಿಯಲ್ಲಿಯೇ ಅವರನ್ನು ಐಗುಪ್ತ ದೇಶದಿಂದ ಹೊರಗೆ ಬರಮಾಡಿದ್ದರಿಂದ ಅವರು ಈ ರಾತ್ರಿಯಲ್ಲಿ ಆತನ ಘನಕ್ಕಾಗಿ ಜಾಗರಣೆಯನ್ನು ಮಾಡಿದರು. ಇಸ್ರಾಯೇಲರೆಲ್ಲರೂ ತಲತಲಾಂತರಕ್ಕೂ ಯೆಹೋವನಿಗೆ ಜಾಗರಣೆಯನ್ನು ಆಚರಿಸಬೇಕಾದ ರಾತ್ರಿಯು ಇದೇ ಆಗಿದೆ.
43 ಯೆಹೋವ ದೇವರು ಮೋಶೆ ಆರೋನರಿಗೆ, “ಪಸ್ಕದ ಶಾಸನವು ಇದೆ: “ವಿದೇಶಿಯರಲ್ಲಿ ಯಾರೂ ಪಸ್ಕಭೋಜನವನ್ನು ತಿನ್ನಬಾರದು.
೪೩ಯೆಹೋವನು ಮೋಶೆ ಮತ್ತು ಆರೋನರಿಗೆ ಹೇಳಿದ್ದೇನೆಂದರೆ, “ಪಸ್ಕವನ್ನು ಆಚರಿಸಬೇಕಾದ ಕ್ರಮ ಹೇಗೆಂದರೆ, ಅನ್ಯನೊಬ್ಬನೂ ಅದರಲ್ಲಿ ಭೋಜನ ಮಾಡಬಾರದು.
44 ಆದರೆ ಕ್ರಯಕ್ಕೆ ತೆಗೆದುಕೊಂಡ ಪ್ರತಿಯೊಬ್ಬ ಗುಲಾಮನು ಸುನ್ನತಿ ಮಾಡಿಸಿಕೊಂಡ ತರುವಾಯ, ಅಂಥವನು ಅದನ್ನು ತಿನ್ನಬಹುದು.
೪೪ಆದರೆ ನೀವು ಕ್ರಯಕ್ಕೆ ತೆಗೆದುಕೊಂಡ ಪ್ರತಿಯೊಬ್ಬ ಗುಲಾಮನು ಸುನ್ನತಿ ಮಾಡಿಸಿಕೊಂಡ ನಂತರ ಅದನ್ನು ತಿನ್ನಬಹುದು.
45 ಪರದೇಶದವರೂ, ಕೂಲಿಯವರೂ, ಅದನ್ನು ತಿನ್ನಬಾರದು.
೪೫ಪರದೇಶದವರೂ, ಕೂಲಿಯವರೂ ಅದನ್ನು ತಿನ್ನಬಾರದು.
46 “ಒಂದೇ ಮನೆಯಲ್ಲಿ ಅದನ್ನು ತಿನ್ನಬೇಕು. ಆ ಮಾಂಸದಲ್ಲಿ ಸ್ವಲ್ಪ ಅಂಶವನ್ನಾದರೂ ಮನೆಯ ಹೊರಗೆ ತೆಗೆದುಕೊಂಡು ಹೋಗಬಾರದು. ಪಶುವಿನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು.
೪೬ಅವರವರ ಮನೆಯಲ್ಲಿಯೇ ಅದನ್ನು ಊಟಮಾಡಬೇಕು. ಅದರಲ್ಲಿ ಸ್ವಲ್ಪ ಮಾಂಸವನ್ನಾದರೂ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಬಾರದು. ಆ ಪಶುವಿನ ಒಂದು ಎಲುಬನ್ನಾದರೂ ಮುರಿಯಬಾರದು.
47 ಇಸ್ರಾಯೇಲಿನ ಸಮೂಹದಲ್ಲಿರುವವರೆಲ್ಲರೂ ಇದನ್ನು ಆಚರಿಸಬೇಕು.
೪೭ಇಸ್ರಾಯೇಲರ ಸಮೂಹದವರೆಲ್ಲರೂ ಈ ಹಬ್ಬವನ್ನು ಆಚರಿಸಬೇಕು.
48 “ನಿಮ್ಮ ಜೊತೆಯಲ್ಲಿ ವಾಸಮಾಡಿದ ಪರದೇಶದವನು ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಬೇಕೆಂದಿದ್ದರೆ, ಅವನ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಳ್ಳಲಿ. ತರುವಾಯ ಅವನು ಅದನ್ನು ಆಚರಿಸುವುದಕ್ಕೆ ಸಮೀಪಬರಲಿ, ಅಂಥವರು ಸ್ವದೇಶದಲ್ಲಿ ಹುಟ್ಟಿದವರಂತೆ ಇರುವರು. ಆದರೆ ಸುನ್ನತಿ ಮಾಡಿಸಿಕೊಳ್ಳದ ಒಬ್ಬನಾದರೂ ಅದನ್ನು ತಿನ್ನಬಾರದು.
೪೮ನಿಮ್ಮ ಬಳಿಯಲ್ಲಿ ವಾಸವಾಗಿರುವ ಪರದೇಶದವನು ಯೆಹೋವನಿಗೆ ಈ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ ಅವನೂ, ಅವನಿಗೆ ಸೇರಿರುವ ಗಂಡಸರೆಲ್ಲರೂ ಸುನ್ನತಿಮಾಡಿಸಿಕೊಳ್ಳಬೇಕು. ತರುವಾಯ ಅವನು ಈ ಹಬ್ಬವನ್ನು ಆಚರಿಸುವುದಕ್ಕೆ ಸಮೀಪ ಬರಲಿ. ಅಂಥವನು ಸ್ವದೇಶದವನಂತೆಯೇ ಇರುವನು. ಆದರೆ ಸುನ್ನತಿಮಾಡಿಸಿಕೊಳ್ಳದವನು ಆ ಭೋಜನವನ್ನು ತಿನ್ನಬಾರದು.
49 ಸ್ವದೇಶದಲ್ಲಿ ಹುಟ್ಟಿದವನಿಗೂ, ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯನಿಗೂ ಒಂದೇ ನಿಯಮವಿರಲಿ,” ಎಂದು ಹೇಳಿದರು.
೪೯ಸ್ವದೇಶದವನಿಗೂ, ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ನಿಯಮವಿರಬೇಕು” ಎಂದನು.
50 ಇಸ್ರಾಯೇಲರೆಲ್ಲಾ ಯೆಹೋವ ದೇವರು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಮಾಡಿದರು.
೫೦ಯೆಹೋವನು ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ ಪ್ರಕಾರ ಇಸ್ರಾಯೇಲರೆಲ್ಲರೂ ಮಾಡಿದರು.
51 ಅದೇ ದಿನದಲ್ಲಿ ಯೆಹೋವ ದೇವರು ಇಸ್ರಾಯೇಲರನ್ನು ಅವರ ಸೈನ್ಯಗಳ ಪ್ರಕಾರ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದರು.
೫೧ಅದೇ ದಿನದಲ್ಲಿ ಯೆಹೋವನು ಇಸ್ರಾಯೇಲರನ್ನು ಅವರವರ ಸೈನ್ಯಗಳ ಪ್ರಕಾರವಾಗಿ ಐಗುಪ್ತ ದೇಶದಿಂದ ಹೊರಗೆ ತಂದನು.

< ವಿಮೋಚನಕಾಂಡ 12 >