< ಅರಸುಗಳು - ದ್ವಿತೀಯ ಭಾಗ 4 >

1 ಪ್ರವಾದಿಗಳ ಗುಂಪಿನಲ್ಲಿದ್ದ ಒಬ್ಬ ಪ್ರವಾದಿಯ ಹೆಂಡತಿ ಎಲೀಷನಿಗೆ ಕೂಗಿ, “ನಿನ್ನ ದಾಸನಾದ ನನ್ನ ಗಂಡನು ಮರಣಹೊಂದಿದನು. ನಿನ್ನ ದಾಸನು ಯೆಹೋವ ದೇವರಿಗೆ ಭಯಪಡುವವನಾಗಿದ್ದನೆಂದು ನೀನು ಬಲ್ಲೆ. ಈಗ ಸಾಲಗಾರನು ನನ್ನ ಇಬ್ಬರು ಮಕ್ಕಳನ್ನು ತನಗೆ ದಾಸರಾಗಿ ತೆಗೆದುಕೊಳ್ಳಲು ಬಂದಿದ್ದಾನೆ,” ಎಂದಳು. 2 ಎಲೀಷನು ಅವಳಿಗೆ, “ನಾನು ನಿನಗೆ ಏನು ಮಾಡಬೇಕು? ಮನೆಯಲ್ಲಿ ನಿನಗೆ ಏನು ಉಂಟು? ನನಗೆ ತಿಳಿಸು,” ಎಂದನು. ಅವಳು, “ನಿನ್ನ ಸೇವಕಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪವೇ ಎಣ್ಣೆ ಅಲ್ಲದೆ ಮನೆಯಲ್ಲಿ ಮತ್ತೊಂದಿಲ್ಲ,” ಎಂದಳು. 3 ಆಗ ಅವನು, “ನೀನು ಹೋಗಿ ಹೊರಗಿರುವ ನಿನ್ನ ಎಲ್ಲಾ ನೆರೆಮನೆಯವರಿಂದ ಬರಿದಾದ ಪಾತ್ರೆಗಳನ್ನು ಬೇಕಾದಷ್ಟು ಕೇಳಿ ತೆಗೆದುಕೊಂಡು ಬಾ. 4 ನೀನು ಒಳಗೆ ಪ್ರವೇಶಿಸಿ, ನೀನೂ, ನಿನ್ನ ಪುತ್ರರೂ ಬಾಗಿಲು ಮುಚ್ಚಿಕೊಂಡು, ಆ ಪಾತ್ರೆಗಳಲ್ಲೆಲ್ಲಾ ಎಣ್ಣೆ ಹೊಯ್ದು ತುಂಬಿದ್ದನ್ನು ಒಂದು ಕಡೆ ಇಡು,” ಎಂದನು. 5 ಹೀಗೆ ಅವಳು ಅವನನ್ನು ಬಿಟ್ಟು ಹೋಗಿ, ತಾನೂ, ತನ್ನ ಪುತ್ರರೂ ಬಾಗಿಲು ಮುಚ್ಚಿದರು. ಇವರು ಅವಳ ಬಳಿಗೆ ಪಾತ್ರೆಗಳನ್ನು ತೆಗೆದುಕೊಂಡು ಬಂದರು. ಅವಳು ಎಣ್ಣೆಯನ್ನು ಅವುಗಳಲ್ಲಿ ಹೊಯ್ದಳು. 6 ಆ ಪಾತ್ರೆಗಳು ತುಂಬಿದ ತರುವಾಯ ಅವಳು ತನ್ನ ಮಗನಿಗೆ, “ಇನ್ನೊಂದು ಪಾತ್ರೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದಳು. ಮಗನು ಅವಳಿಗೆ, “ಇನ್ನೊಂದು ಪಾತ್ರೆ ಇಲ್ಲ,” ಎಂದನು. ಆಗ ಎಣ್ಣೆಯು ನಿಂತುಹೋಯಿತು. 7 ಅವಳು ಬಂದು ದೇವರ ಮನುಷ್ಯನಿಗೆ ತಿಳಿಸಿದಳು. ಅವನು, “ನೀನು ಹೋಗಿ ಆ ಎಣ್ಣೆಯನ್ನು ಮಾರಿ ನಿನ್ನ ಸಾಲವನ್ನು ತೀರಿಸಿ, ಮಿಕ್ಕದ್ದರಿಂದ ನೀನೂ, ನಿನ್ನ ಮಕ್ಕಳು ಜೀವನ ಮಾಡಿರಿ,” ಎಂದನು. 8 ಒಂದು ದಿನ ಎಲೀಷನು ಶೂನೇಮಿಗೆ ಹೋದನು. ಅಲ್ಲಿ ಒಬ್ಬಳು ಶ್ರೀಮಂತ ಸ್ತ್ರೀಯು ಇದ್ದಳು. ಅವಳು ಅವನನ್ನು ಊಟ ಮಾಡಲು ಬಲವಂತ ಮಾಡಿದಳು. ಹಾಗೆಯೇ ಅವನು ಆ ಮಾರ್ಗವಾಗಿ ಹೋಗುವಾಗಲೆಲ್ಲಾ, ಅಲ್ಲಿ ಊಟ ಮಾಡಲು ಹೋಗುತ್ತಿದ್ದನು. 9 ಆದ್ದರಿಂದ ಅವಳು ತನ್ನ ಗಂಡನಿಗೆ, “ಇಗೋ, ನಮ್ಮ ಬಳಿಯಲ್ಲಿ ಯಾವಾಗಲೂ ಹಾದುಹೋಗುವ ಇವನು ದೇವರ ಪರಿಶುದ್ಧ ಮನುಷ್ಯನಾಗಿರುತ್ತಾನೆಂದು ನನಗೆ ಗೊತ್ತಾಯಿತು. 10 ನಾವು ಮಾಳಿಗೆಯ ಮೇಲೆ ಒಂದು ಚಿಕ್ಕ ಕೊಠಡಿಯನ್ನು ಕಟ್ಟಿಸಿ, ಅದರಲ್ಲಿ ಅವನಿಗೋಸ್ಕರ ಮಂಚವನ್ನೂ, ಮೇಜನ್ನೂ, ಕುರ್ಚಿಯನ್ನೂ, ದೀಪವನ್ನೂ ಇಡೋಣ. ಅವನು ನಮ್ಮ ಬಳಿಗೆ ಬರುವಾಗ ಅಲ್ಲಿ ಇರಲಿ,” ಎಂದಳು. 11 ಒಂದು ದಿವಸ ಎಲೀಷನು ಅಲ್ಲಿಗೆ ಬಂದು, ಆ ಕೊಠಡಿಯಲ್ಲಿ ಪ್ರವೇಶಿಸಿ ಮಲಗಿದನು. 12 ಆಗ ಎಲೀಷನು ತನ್ನ ಸೇವಕನಾದ ಗೇಹಜಿಗೆ, “ನೀನು ಶೂನೇಮ್ಯಳನ್ನು ಕರೆ,” ಎಂದನು. ಅವನು ಅವಳನ್ನು ಕರೆದದ್ದರಿಂದ ಅವಳು ಎಲೀಷನ ಮುಂದೆ ಬಂದು ನಿಂತಳು. 13 ಅವನು ಗೇಹಜಿಗೆ, “ಇಗೋ, ನೀನು ಕಷ್ಟಪಟ್ಟು ನಮಗೋಸ್ಕರ ಉಪಕಾರಮಾಡಿದೆ. ನಾನು ನಿನಗೆ ಮಾಡಬೇಕಾದದ್ದೇನು? ನಿನಗೋಸ್ಕರ ಅರಸನ ಸಂಗಡಲಾದರೂ, ಸೈನ್ಯಾಧಿಪತಿಯ ಸಂಗಡಲಾದರೂ ಮಾತನಾಡಬೇಕೋ ಎಂದು ಆಕೆಗೆ ಕೇಳು,” ಎಂದನು. ಅದಕ್ಕವಳು, “ನಾನು ನನ್ನ ಜನರ ಮಧ್ಯದಲ್ಲಿ ಸುಖವಾಗಿದ್ದೇನೆ,” ಎಂದಳು. 14 ಎಲೀಷನು ಗೇಹಜಿಗೆ, “ಅವಳಿಗೋಸ್ಕರ ಮಾಡಬೇಕಾದದ್ದೇನು?” ಎಂದನು. ಅದಕ್ಕೆ ಗೇಹಜಿಯು, “ಅವಳಿಗೆ ಮಕ್ಕಳಿಲ್ಲ. ಅವಳ ಗಂಡನು ವೃದ್ಧನಾಗಿದ್ದಾನೆ,” ಎಂದನು. 15 ಪ್ರವಾದಿಯು, “ಅವಳನ್ನು ಕರೆ,” ಎಂದನು. ಗೇಹಜಿಯು ಅವಳನ್ನು ಕರೆದಾಗ ಅವಳು ಬಾಗಿಲಲ್ಲೇ ನಿಂತಳು. 16 ಆಗ ಅವನು, “ಮುಂದಿನ ವರ್ಷ ಈ ಸಮಯದಲ್ಲಿ ನಿನ್ನ ಕೈಯಲ್ಲಿ ಒಬ್ಬ ಮಗನನ್ನು ಎತ್ತಿಕೊಂಡಿರುವೆ,” ಎಂದನು. ಅದಕ್ಕವಳು, “ಹಾಗಲ್ಲ, ದೇವರ ಮನುಷ್ಯನೇ, ನನ್ನ ಒಡೆಯನೇ, ನಿನ್ನ ಸೇವಕಿಗೆ ನೀನು ಸುಳ್ಳು ಹೇಳಬೇಡ,” ಎಂದಳು. 17 ಆದರೆ, ಆ ಸ್ತ್ರೀಯು ಗರ್ಭಧರಿಸಿ, ಎಲೀಷನು ಹೇಳಿದ ಪ್ರಕಾರ ಮುಂದಿನ ವರ್ಷದ ಅದೇ ಸಮಯದಲ್ಲಿ ಮಗನನ್ನು ಹೆತ್ತಳು. 18 ಆ ಮಗುವು ಬೆಳೆದಾಗ ಒಂದು ದಿವಸ, ಅವನು ಬೆಳೆ ಕೊಯ್ಯುವವರ ಬಳಿಯಲ್ಲಿರುವ ತನ್ನ ತಂದೆಯ ಬಳಿಗೆ ಹೋದನು. 19 ಆಗ ಅವನು ತನ್ನ ತಂದೆಗೆ, “ನನ್ನ ತಲೆ, ನನ್ನ ತಲೆ,” ಎಂದನು. ತಂದೆಯು ತನ್ನ ಸೇವಕನಿಗೆ, “ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋಗು,” ಎಂದನು. 20 ಸೇವಕನು ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋದನು. ಅವನು ಮಧ್ಯಾಹ್ನದವರೆಗೂ ಅವಳ ತೊಡೆಯ ಮೇಲೆ ಇದ್ದು ಅನಂತರ ಮರಣಹೊಂದಿದನು. 21 ಆಗ ಅವಳು ಏರಿಹೋಗಿ, ಅವನನ್ನು ದೇವರ ಮನುಷ್ಯನ ಮಂಚದ ಮೇಲೆ ಮಲಗಿಸಿ ಬಾಗಿಲು ಮುಚ್ಚಿದಳು. 22 ತನ್ನ ಗಂಡನನ್ನು ಕರೆದು, “ನಾನು ದೇವರ ಮನುಷ್ಯನ ಬಳಿಗೆ ಬೇಗನೆ ಹೋಗಿ ತಿರುಗಿ ಬರುವ ಹಾಗೆ, ನೀನು ದಯಮಾಡಿ ಸೇವಕನನ್ನೂ ಒಂದು ಕತ್ತೆಯನ್ನೂ ಕಳುಹಿಸು,” ಎಂದಳು. 23 ಅದಕ್ಕೆ ಅವನು, “ಇದು ಅಮಾವಾಸ್ಯೆ ಅಲ್ಲ, ಸಬ್ಬತ್ ದಿನವೂ ಅಲ್ಲ. ನೀನು ಏಕೆ ಈ ಹೊತ್ತು ಅವನ ಬಳಿಗೆ ಹೋಗುತ್ತೀ?” ಎಂದನು. ಅದಕ್ಕವಳು, “ಅಡ್ಡಿಯೇನಿಲ್ಲ,” ಎಂದಳು. 24 ಆಗ ಅವಳು ಕತ್ತೆಯ ಮೇಲೆ ತಡಿಯನ್ನು ಹಾಕಿಸಿ ತನ್ನ ಸೇವಕನಿಗೆ, “ನಡೆಸಿಕೊಂಡು ಹೋಗು. ನಾನು ನಿನಗೆ ಹೇಳುವವರೆಗೂ, ನನಗೋಸ್ಕರ ಸವಾರಿಯನ್ನು ನಿಧಾನಗೊಳಿಸಬೇಡ,” ಎಂದು ಹೇಳಿ, 25 ಕರ್ಮೆಲ್ ಬೆಟ್ಟದಲ್ಲಿರುವ ದೇವರ ಮನುಷ್ಯನ ಬಳಿಗೆ ಬಂದಳು. ಆಗ ದೇವರ ಮನುಷ್ಯನು ದೂರದಿಂದ ಅವಳು ಬರುವುದನ್ನು ಕಂಡನು. ಅವನು ತನ್ನ ಸೇವಕನಾದ ಗೇಹಜಿಗೆ, “ಇಗೋ, ಆ ಶೂನೇಮ್ಯಳು ಬರುತ್ತಿದ್ದಾಳೆ. 26 ನೀನು ಅವಳನ್ನು ಎದುರುಗೊಳ್ಳಲು ಓಡಿಹೋಗಿ, ಅವಳಿಗೆ, ‘ನಿನಗೂ, ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೇ? ಎಂದು ಕೇಳು,’” ಎಂದನು. ಅವಳು, “ಕ್ಷೇಮ” ಎಂದಳು. 27 ಅವಳು ಬೆಟ್ಟಕ್ಕೆ ದೇವರ ಮನುಷ್ಯನ ಬಳಿಗೆ ಬಂದು, ಅವನ ಪಾದಗಳನ್ನು ಹಿಡಿದಳು. ಆದರೆ ಅವಳನ್ನು ತಳ್ಳಿ ಹಾಕಲು ಗೇಹಜಿಯು ಹತ್ತಿರ ಬಂದದ್ದರಿಂದ ದೇವರ ಮನುಷ್ಯನು, “ಅವಳನ್ನು ಬಿಡು. ಏಕೆಂದರೆ ಅವಳ ಹೃದಯವು ಬಹಳ ನೋವಿನಿಂದ ತುಂಬಿದೆ. ಯೆಹೋವ ದೇವರು ಅದನ್ನು ನನಗೆ ತಿಳಿಸದೆ ಮರೆಮಾಡಿದ್ದಾರೆ,” ಎಂದನು. 28 ಆಗ ಅವಳು, “ನಾನು ನನ್ನ ಒಡೆಯನಿಂದ ಪುತ್ರನನ್ನು ಕೇಳಿಕೊಂಡೆನೋ? ನನ್ನನ್ನು ಮೋಸಗೊಳಿಸಬೇಡವೆಂದು ನಾನು ಹೇಳಲಿಲ್ಲವೋ?” ಎಂದಳು. 29 ಎಲೀಷನು ಗೇಹಜಿಗೆ, “ನೀನು ನಿನ್ನ ಸಡಿಲವಾದ ಉಡುಪನ್ನು ನಡುವಿಗೆ ಕಟ್ಟಿಕೊಂಡು, ನನ್ನ ಕೋಲನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡು ಹೋಗು. ನಿನಗೆ ಯಾವನಾದರೂ ಎದುರುಗೊಂಡರೆ, ಅವನನ್ನು ವಂದಿಸಬೇಡ; ಯಾವನಾದರೂ ನಿನ್ನನ್ನು ವಂದಿಸಿದರೆ, ಅವನಿಗೆ ಉತ್ತರ ಹೇಳಬೇಡ; ನನ್ನ ಕೋಲನ್ನು ಆ ಹುಡುಗನ ಮುಖದ ಮೇಲೆ ಹಾಕು,” ಎಂದನು. 30 ಆದರೆ ಹುಡುಗನ ತಾಯಿಯು, “ಯೆಹೋವ ದೇವರ ಜೀವದಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದಳು. ಆಗ ಅವನೆದ್ದು ಅವಳ ಹಿಂದೆ ಹೋದನು. 31 ಗೇಹಜಿಯು ಅವರಿಗೆ ಮುಂದಾಗಿ ಹೋಗಿ, ಆ ಕೋಲನ್ನು ಆ ಹುಡುಗನ ಮುಖದ ಮೇಲೆ ಇಟ್ಟನು. ಆದರೆ ಶಬ್ದವಾದರೂ, ಆಲೈಸುವುದಾದರೂ ಇರಲಿಲ್ಲ. ಆದ್ದರಿಂದ ಗೇಹಜಿಯು ಎಲೀಷನನ್ನು ಎದುರುಗೊಳ್ಳಲು ತಿರುಗಿ ಹೋಗಿ ಅವನಿಗೆ, “ಹುಡುಗನು ಎಚ್ಚರವಾಗಲಿಲ್ಲ,” ಎಂದನು. 32 ಎಲೀಷನು ಆ ಮನೆಯನ್ನು ಮುಟ್ಟಿದಾಗ, ಸತ್ತ ಹುಡುಗನನ್ನು ತನ್ನ ಮಂಚದ ಮೇಲೆ ಇಟ್ಟಿರುವುದನ್ನು ಕಂಡನು. 33 ಅವನು ಒಳಗೆ ಪ್ರವೇಶಿಸಿ, ಯಾರೂ ಒಳಗೆ ಬಾರದಂತೆ ಬಾಗಿಲು ಮುಚ್ಚಿಕೊಂಡು, ಯೆಹೋವ ದೇವರನ್ನು ಪ್ರಾರ್ಥಿಸಿದನು. 34 ಅವನು ಮಗುವಿನ ಮೇಲೆ ಮಲಗಿಕೊಂಡು, ತನ್ನ ಬಾಯಿಯನ್ನು ಅವನ ಬಾಯಿಯ ಮೇಲೆಯೂ, ತನ್ನ ಕಣ್ಣುಗಳನ್ನು ಅವನ ಕಣ್ಣುಗಳ ಮೇಲೆಯೂ, ತನ್ನ ಕೈಗಳನ್ನು ಅವನ ಕೈಗಳ ಮೇಲೆಯೂ ಇರಿಸಿದನು. ಅವನ ಮೇಲೆ ಬೋರಲು ಬಿದ್ದುದರಿಂದ ಮಗುವಿನ ಶರೀರವು ಬೆಚ್ಚಗೆ ಆಯಿತು. 35 ಅವನು ಆಮೇಲೆ ಎದ್ದು ಕೋಣೆಯಲ್ಲಿ ಸ್ವಲ್ಪ ಅತ್ತಿತ್ತ ತಿರುಗಾಡಿ, ಪುನಃ ಅವನ ಮೇಲೆ ಬೋರಲು ಬಿದ್ದನು. ಆಗ ಆ ಹುಡುಗನು ಏಳು ಸಾರಿ ಸೀತು ಕಣ್ಣುಗಳನ್ನು ತೆರೆದನು. 36 ಆಗ ಅವನು ಗೇಹಜಿಯನ್ನು ಕರೆದು ಅವನಿಗೆ, “ಶೂನೇಮ್ಯಳನ್ನು ಕರೆ,” ಎಂದನು. ಗೇಹಜಿಯು ಅವಳನ್ನು ಕರೆದನು. ಅವಳು ಎಲೀಷನ ಬಳಿಗೆ ಬಂದಾಗ ಅವನು, “ನಿನ್ನ ಪುತ್ರನನ್ನು ತೆಗೆದುಕೊಂಡು ಹೋಗು,” ಎಂದನು. 37 ಆಗ ಅವಳು ಬಂದು, ಅವನ ಪಾದಗಳ ಮೇಲೆ ಬಿದ್ದು, ನೆಲಕ್ಕೆ ಬಗ್ಗಿ ತನ್ನ ಮಗನನ್ನು ಎತ್ತಿಕೊಂಡು ಹೊರಟು ಹೋದಳು. 38 ಎಲೀಷನು ತಿರುಗಿ ಗಿಲ್ಗಾಲಿಗೆ ಬಂದಾಗ, ದೇಶದಲ್ಲಿ ಬರ ಉಂಟಾಗಿತ್ತು. ಪ್ರವಾದಿಗಳ ಮಂಡಳಿ ಅವನ ಮುಂದೆ ಕುಳಿತಿರುವಾಗ, ಅವನು ತನ್ನ ಸೇವಕನಿಗೆ, “ನೀನು ದೊಡ್ಡ ಗಡಿಗೆಯನ್ನು ಮೇಲಿಟ್ಟು, ಈ ಜನರಿಗೋಸ್ಕರ ಅಡಿಗೆ ಮಾಡು,” ಎಂದನು. 39 ಅವರಲ್ಲಿ ಒಬ್ಬನು ಪಲ್ಯವನ್ನು ತರಲು ಅಡವಿಗೆ ಹೋಗಿ, ಅಡವಿಯ ಬಳ್ಳಿಯನ್ನು ಕಂಡು, ಅಡವಿಯ ಕಾಯಿಗಳನ್ನು ತನ್ನ ಉಡಿಯ ತುಂಬ ಕೂಡಿಸಿಕೊಂಡು ಬಂದು, ಅವುಗಳನ್ನು ಕೊಯ್ದು ಗಡಿಗೆಯಲ್ಲಿ ಹಾಕಿದನು. ಅವು ಏನೆಂದು ಯಾರಿಗೂ ತಿಳಿದಿರಲಿಲ್ಲ. 40 ಜನರಿಗೆ ಅದನ್ನು ತಿನ್ನುವುದಕ್ಕೆ ಬಡಿಸಿದರು. ಅವರು ಆಹಾರವನ್ನು ತಿನ್ನುತ್ತಿರುವಾಗ, “ದೇವರ ಮನುಷ್ಯನೇ, ಗಡಿಗೆಯಲ್ಲಿ ಮರಣ,” ಎಂದು ಕೂಗಿದರು. ಅವರು ಅದರಲ್ಲಿದ್ದದ್ದನ್ನು ತಿನ್ನಲಾರದೆ ಹೋದರು. 41 ಆಗ ಎಲೀಷನು ಹಿಟ್ಟನ್ನು ತೆಗೆದುಕೊಂಡು ಬರಲು ಹೇಳಿ, ಅದನ್ನು ಗಡಿಗೆಯಲ್ಲಿ ಹಾಕಿ, “ಈಗ ಇದನ್ನು ಜನರಿಗೆ ಬಡಿಸಿರಿ,” ಎಂದನು. ಆಗ ಆ ಗಡಿಗೆಯಲ್ಲಿನ ವಿಷವೆಲ್ಲಾ ಹೋಗಿತ್ತು. 42 ಬಾಳ್ ಶಾಲಿಷಾ ಊರಿನಿಂದ ಒಬ್ಬನು ದೇವರ ಮನುಷ್ಯನಿಗೆ ಪ್ರಥಮ ಫಲವಾದ ಜವೆಗೋಧಿಯ ಇಪ್ಪತ್ತು ರೊಟ್ಟಿಗಳನ್ನೂ ಒಂದು ಚೀಲ ತುಂಬಿದ ತೆನೆಗಳನ್ನೂ ತೆಗೆದುಕೊಂಡು ಬಂದನು. ಆಗ ಎಲೀಷನು, “ಜನರಿಗೆ ಕೊಡು ಅವರು ತಿನ್ನಲಿ,” ಎಂದನು. 43 ಅವನ ಸೇವಕನು, “ಇದನ್ನು ನೂರು ಮಂದಿಗೆ ಬಡಿಸುವುದು ಹೇಗೆ?” ಎಂದನು. “‘ತಿನ್ನಲು ಜನರಿಗೆ ನೀಡು, ಅವರು ತಿಂದು ಅನಂತರ ಉಳಿಯುವುದು,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಎಲೀಷನು ಉತ್ತರಕೊಟ್ಟನು. 44 ಹಾಗೆಯೇ ಸೇವಕನು ಬಡಿಸಿದನು. ಯೆಹೋವ ದೇವರು ನುಡಿದಂತೆಯೇ ಜನರು ಊಟಮಾಡಿ, ತೃಪ್ತರಾಗಿ ಇನ್ನೂ ಉಳಿಯಿತು.

< ಅರಸುಗಳು - ದ್ವಿತೀಯ ಭಾಗ 4 >