< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 1 >

1 ದಾವೀದನ ಮಗ ಸೊಲೊಮೋನನು ತನ್ನ ರಾಜ್ಯದಲ್ಲಿ ಬಲಗೊಂಡನು ಮತ್ತು ಅವನ ದೇವರಾದ ಯೆಹೋವ ದೇವರು ಅವನ ಸಂಗಡ ಇದ್ದು, ಅವನನ್ನು ಉನ್ನತನನ್ನಾಗಿ ಮಾಡಿದರು. 2 ಆಗ ಸೊಲೊಮೋನನು ಸಮಸ್ತ ಇಸ್ರಾಯೇಲರ ಶತಾಧಿಪತಿಗಳೊಂದಿಗೂ, ಸಹಸ್ರಾಧಿಪತಿಗಳೊಂದಿಗೂ, ನ್ಯಾಯಾಧಿಪತಿಗಳೊಂದಿಗೂ, ಪ್ರಧಾನರಾದವರೊಂದಿಗೂ, ಸಮಸ್ತ ಇಸ್ರಾಯೇಲರ ಪಿತೃಗಳ ಶ್ರೇಷ್ಠರಾದ ಸಮಸ್ತ ಪ್ರಭುಗಳೊಂದಿಗೂ ಮಾತನಾಡಿದನು. 3 ಹೀಗೆ ಅವನೂ, ಅವನ ಸಂಗಡ ಸಮಸ್ತ ಸಮೂಹವೂ ಗಿಬ್ಯೋನಿನಲ್ಲಿರುವ ಉನ್ನತ ಸ್ಥಳಕ್ಕೆ ಹೋದರು. ಯೆಹೋವ ದೇವರ ಸೇವಕನಾದ ಮೋಶೆಯು ಮರುಭೂಮಿಯಲ್ಲಿ ಮಾಡಿದ ದೇವದರ್ಶನ ಗುಡಾರವು ಅಲ್ಲಿತ್ತು. 4 ಆದರೆ ದಾವೀದನು ಯೆಹೋವ ದೇವರ ಮಂಜೂಷವನ್ನು ಕಿರ್ಯತ್ ಯಾರೀಮಿನಿಂದ ತಾನು ಅದಕ್ಕೋಸ್ಕರ ಸಿದ್ಧಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬಂದಿದ್ದನು. ಅವನು ಯೆರೂಸಲೇಮಿನಲ್ಲಿ ಅದಕ್ಕೋಸ್ಕರ ಗುಡಾರವನ್ನು ಹಾಕಿಸಿದ್ದನು. 5 ಆದರೆ ಊರಿಯನ ಮಗ, ಹೂರನ ಮೊಮ್ಮಗನಾದ ಬೆಚಲಯೇಲನು ಮಾಡಿದ ಕಂಚಿನ ಬಲಿಪೀಠವು ಗಿಬ್ಯೋನಿನಲ್ಲಿ ಯೆಹೋವ ದೇವರ ಗುಡಾರದ ಮುಂದೆ ಇತ್ತು. ಅಲ್ಲಿ ಸೊಲೊಮೋನನೂ, ಸಭೆಯೂ ದೇವರ ಇಚ್ಛೆಯನ್ನು ವಿಚಾರಿಸಿದರು. 6 ಆಗ ಸೊಲೊಮೋನನು ಸಭೆಯ ಗುಡಾರದ ಬಳಿಯಲ್ಲಿ ಯೆಹೋವ ದೇವರ ಮುಂದೆ ಇರುವ ಕಂಚಿನ ಪೀಠದ ಬಳಿಗೆ ಹೋಗಿ, ಅದರ ಮೇಲೆ ಸಹಸ್ರ ದಹನಬಲಿಗಳನ್ನು ಅರ್ಪಿಸಿದನು. 7 ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು ಅವನಿಗೆ, “ನಾನು ನಿನಗೆ ಏನು ವರ ಕೊಡಬೇಕು? ಕೇಳಿಕೋ,” ಎಂದರು. 8 ಅದಕ್ಕೆ ಸೊಲೊಮೋನನು ದೇವರಿಗೆ, “ನೀವು ನನ್ನ ತಂದೆ ದಾವೀದನಿಗೆ ಮಹಾಕರುಣೆಯನ್ನು ತೋರಿಸಿದ್ದೀರಿ, ಅವನಿಗೆ ಬದಲಾಗಿ ನಾನು ಆಳುವಂತೆ ಮಾಡಿದಿರಿ. 9 ಈಗ ಯೆಹೋವ ದೇವರೇ, ನೀವು ನನ್ನ ತಂದೆ ದಾವೀದನಿಗೆ ಮಾಡಿದ ವಾಗ್ದಾನವು ದೃಢವಾಗಲಿ. ಏಕೆಂದರೆ ಭೂಮಿಯ ಧೂಳಿನಷ್ಟು ಅಸಂಖ್ಯಾತ ಜನರ ಮೇಲೆ ನನ್ನನ್ನು ಅರಸನನ್ನಾಗಿ ಮಾಡಿದ್ದೀರಿ. 10 ನಾನು ಈ ಜನರನ್ನು ಪರಿಪಾಲಿಸುವುದಕ್ಕೆ ಜ್ಞಾನವನ್ನೂ, ತಿಳುವಳಿಕೆಯನ್ನೂ ಕೊಡಿರಿ. ಏಕೆಂದರೆ ಈ ನಿಮ್ಮ ಮಹಾಜನರ ನ್ಯಾಯತೀರಿಸುವುದಕ್ಕೆ ಸಾಮರ್ಥ್ಯವುಳ್ಳವರು ಯಾರು?” ಎಂದನು. 11 ಆಗ ದೇವರು ಸೊಲೊಮೋನನಿಗೆ, “ಇದು ನಿನ್ನ ಹೃದಯದಲ್ಲಿ ಇದ್ದುದರಿಂದಲೂ ನೀನು ಐಶ್ವರ್ಯವನ್ನೂ, ಸ್ಥಿತಿಯನ್ನೂ, ಘನವನ್ನೂ, ನಿನ್ನ ಶತ್ರುಗಳ ಪ್ರಾಣವನ್ನೂ ಕೇಳದೆ ಮತ್ತು ಹೆಚ್ಚಾದ ದಿವಸಗಳನ್ನೂ ನೀನು ಕೇಳದೆ, ನಾನು ಯಾರ ಮೇಲೆ ನಿನ್ನನ್ನು ಅರಸನಾಗಿ ಮಾಡಿದೆನೋ, ಆ ನನ್ನ ಜನರಿಗೆ ನೀನು ನ್ಯಾಯತೀರಿಸುವ ಹಾಗೆ, ಜ್ಞಾನವನ್ನೂ, ತಿಳುವಳಿಕೆಯನ್ನೂ ನೀನು ಕೇಳಿದ್ದರಿಂದಲೂ; 12 ಜ್ಞಾನ ಮತ್ತು ತಿಳುವಳಿಕೆಯನ್ನು ನಿನಗೆ ಕೊಡುತ್ತೇನೆ. ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸರಲ್ಲಿ ಯಾರಿಗೂ ಇಲ್ಲದಂಥ ಮತ್ತು ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ, ಆಸ್ತಿಯನ್ನೂ, ಘನವನ್ನೂ ಕೊಡುತ್ತೇನೆ,” ಎಂದರು. 13 ತರುವಾಯ ಸೊಲೊಮೋನನು ಗಿಬ್ಯೋನಿನ ಉನ್ನತ ಸ್ಥಳದಲ್ಲಿದ್ದ ದೇವದರ್ಶನ ಗುಡಾರವನ್ನು ಬಿಟ್ಟು, ಯೆರೂಸಲೇಮಿಗೆ ಬಂದು, ಇಸ್ರಾಯೇಲನ್ನು ಆಳಿದನು. 14 ಇದಲ್ಲದೆ ಸೊಲೊಮೋನನು ರಥಗಳನ್ನೂ, ರಾಹುತರನ್ನೂ ಕೂಡಿಸಿದನು. ಸಾವಿರದ ನಾನೂರು ರಥಗಳು, ಹನ್ನೆರಡು ಸಾವಿರ ಕುದುರೆಯ ರಾಹುತರು ಇದ್ದರು. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೇ ಇರಿಸಿದನು, ಉಳಿದವುಗಳನ್ನು ರಥಗಳ ಪಟ್ಟಣಗಳಲ್ಲಿಯೂ ಇರಿಸಿದನು. 15 ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಬಂಗಾರವನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು. 16 ಇದಲ್ಲದೆ ಸೊಲೊಮೋನನಿಗೆ ಈಜಿಪ್ಟಿನಿಂದಲೂ ಕುವೆಯಿಂದಲೂ ಕುದುರೆಗಳು ಬರುತ್ತಿದ್ದವು. ಅರಸನ ವರ್ತಕರು ಅವುಗಳನ್ನು ಹಿಂಡುಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು 17 ಹಾಗೆಯೇ ಈಜಿಪ್ಟಿನಿಂದ ಆರುನೂರು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ರಥವನ್ನೂ ನೂರ ಐವತ್ತು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ಕುದುರೆಯನ್ನೂ ತರಿಸುತ್ತಿದ್ದರು. ಈ ಪ್ರಕಾರ ಹಿತ್ತಿಯರ ಮತ್ತು ಅರಾಮಿನ ಅರಸುಗಳೆಲ್ಲರು ಇವರ ಮುಖಾಂತರವಾಗಿಯೇ ತರಿಸುತ್ತಿದ್ದರು.

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 1 >